ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್ ನ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು ಜಂಟಿಯಾಗಿ ಮೂತ್ರಜನಕಾಂಗ ರೋಗಿಗಳಿಗಾಗಿ ರಚಿಸುವ ಕಾಸರಗೋಡು ಇನೀಶಿಯೇಟಿವ್ ಫಾರ್ ಡಯಾಲಿಸಿಸ್ ಸೊಸೈಟಿ(ಕಿಡ್ಸ್) ಗೆ ರಾಜ್ಯ ಏಕೋಪನ ಸಮಿತಿ ಅಂಗೀಕಾರ ನೀಡಿದೆ.
ಕಾಸರಗೋಡು ಜಿಲ್ಲೆಯ 9 ಕೇಂದ್ರಗಲಲ್ಲಿ ಡಯಾಲಿಸಿಸ್ ಸೌಲಭ್ಯ ಏರ್ಪಡಿಸಿ ಬಡ ಕಿಡ್ನಿ ರೋಗಿಗಳಿಗೆ ಚಿಕಿತ್ಸೆ ಸಹಾಯ ನೀಡುವುದು ಈ ಯೋಜನೆಯ ಉದ್ದೇಶ.
ಜಿಲ್ಲೆಯ ಸ್ವಂತ ಯೋಜನೆಯಾಗಿರುವ ಕಿಡ್ಸ್ ಗೆ ಅಂಗೀಕಾರ ಲಭಿಸಿರುವ ಹಿನ್ನೆಲೆಯಲ್ಲಿ 9 ಕೇಂದ್ರಗಳಲ್ಲೂ ನ.5ರ ಮುಂಚಿತವಾಗಿ ಮೆನೆಜ್ ಮೆಂಟ್ ಕಮಿಟಿ ರಚಿಸಲು ಜಿಲ್ಲಾ ಪಂಚಾಯತ್ ಸಭೆ ತೀರ್ಮಾನಿಸಿದೆ.
ಆಯಾ ಡಯಾಲಿಸಿಸ್ ಕೇಂದ್ರಗಳಲ್ಲಿ ಬ್ಲೋಕ್ ಪಂಚಾಯತ್ ಅಧ್ಯಕ್ಷ/ ನಗರಸಭೆ ಅಧ್ಯಕ್ಷ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತ್ ಸದಸ್ಯರು ಉಪಾಧ್ಯಕ್ಷರುಗಳಾಗಿ, ವೈದ್ಯಾಧಿಕಾರಿ/ ವರಿಷ್ಠಾಧಿಕಾರಿ ಸಂಚಾಲಕರಾಗಿ ಮೆನೆಜ್ ಮೆಂಟ್ ಕಮಿಟಿ ರಚನೆಗೊಳ್ಳಲಿದೆ. ಪ್ರತಿ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಮೆನೆಜ್ ಮೆಂಟ್ಕಮಿಟಿಯ ಸದಸ್ಯರಾಗಿ ಚಟುವಟಿಕೆ ನಡೆಸುವರು.
ನ.15ರ ಮುಂಚಿತವಾಗಿ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆ ನಡೆಸಿ ರೋಗಿಗಳಿಗೆ ಸೇವೆ ಲಭ್ಯವಾಗಿಸಲು ಜಿಲ್ಲಾ ಪಂಚಾಯತ್ ಉದ್ದೇಶಿಸಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದರು. ಮುಳಿಯಾರು, ಪೆರಿಯ, ನೀಲೇಶ್ವರಗಳಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸುವ ನಿಟ್ಟಿನಲ್ಲಿ ಜಲತಪಾಸಣೆ ವರದಿ ಲಭಿಸಿದೆ. ಬದಿಯಡ್ಕ, ಪೂಡಂಗಲ್ಲು ಪ್ರದೇಶಗಳಲ್ಲಿ ಸಣ್ಣಪುಟ್ಟ ಕಾಮಗಾರಿ ನಡೆದುಬರುತ್ತಿದೆ. ಇತರ 4 ಕೇಂದ್ರಗಳ ಚಟುವಟಿಕೆ ನಡೆದುಬರುತ್ತಿದೆ. 2 ಕಡೆ ರಿವರ್ಸ್ ಓಸ್ಮೋಸಿಸ್ ಪ್ಲಾಂಟ್ ತ್ವರಿತಗತಿಯಲ್ಲಿ ಪೂರ್ತಿಗೊಳಿಸಲಾಗುವುದು.
ಯೋಜನೆಯ ಜಿಲ್ಲಾ ಸಂಚಾಲಕರಾಗಿ ತ್ರಿಕರಿಪುರ ಸಮುದಾಯ ಆರೋಗ್ಯ ಕೇಂದ್ರದ ಡಾ.ವಿ.ಸುರೇಶ್ ಅವರನ್ನು, ಜಿಲ್ಲಾ ಪಂಚಾಯತ್ ಪ್ರತಿನಿಧಿಯಾಗಿ ಹಣಕಾಸು ಅಧಿಕಾರಿ ದಿಲೀಪ್ ಅವರಿಗೆ ಹೊಣೆ ನೀಡಲಾಗಿದೆ. ಜಿಲ್ಲಾ ವೈದ್ಯಾದಿಕಾರಿ ನಿರ್ವಹಣೆ ಅಧಿಕಾರಿಯಾಗಿದ್ದಾರೆ.




