ಮುಂಬೈ: ದೂರದರ್ಶನದ ಜನಪ್ರಿಯ 'ರಾಮಾಯಣ' ಧಾರಾವಾಹಿಯಲ್ಲಿ 'ರಾವಣ' ಪಾತ್ರದ ಮೂಲಕ ದೇಶಾದ್ಯಂತ ಮನೆಮಾತಾಗಿದ್ದ ಹಿರಿಯ ನಟ ಅರವಿಂದ ತ್ರಿವೇದಿ ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಅರವಿಂದ್ ಅವರ ಸಹ ನಟ ಸುನಿಲ್ ಲಾಹಿರಿ, ಮೃತ ನಟನ ಚಿತ್ರವನ್ನು ಬುಧವಾರ ಮುಂಜಾನೆ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ, "ಬಹುತ್ ದುಖದ್ ಸಮಾಚಾರ್ ಹೈ ಕಿ ಹಮಾರೆ ಸಬ್ಕೆ ಪ್ಯಾರೆ ಅರವಿಂದ್ ಭಾಯ್ (ರಾಮಾಯಣದ ರಾವಣ) ಅಬ್ ಹಮಾರೆ ಬೀಚ್ ನಹೀ ರಹೇ ಭಗವಾನ್ ಉನ್ಕಿ ಆತ್ಮ ಕೊ ಶಾಂತಿ ದೇ" ಎಂದು ಸಂತಾಪ ಸೂಚಿಸಿದ್ದಾರೆ. "ತಂದೆ ಸಮಾನ, ಮಾರ್ಗದರ್ಶಕ, ಹಿತೈಷಿ ಹಾಗೂ ಸಭ್ಯರಾದ ಅರವಿಂದ್ ನಿಧನದಿಂದ ನಾನು ಸ್ತಂಭೀಭೂತನಾಗಿದ್ದೇನೆ ಎಂದು ದುಃಖಿಸಿದ್ದಾರೆ.
ಎಬಿಪಿ ವರದಿ ಪ್ರಕಾರ ಹಿರಿಯ ನಟ ಅಸ್ವಸ್ಥರಾಗಿ ನಡೆದಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಅರವಿಂದ್ ಅವರ ಅಳಿಯ ಕೌಸ್ತುಭ್ ತ್ರಿವೇದಿಯವರ ಪ್ರಕಾರ, "ಮಾವ ಕೆಲ ವರ್ಷಗಳಿಂದ ಅಸ್ವಸ್ಥರಾಗಿದ್ದರು. ಕಳೆದ ಮೂರು ವರ್ಷಗಳಲ್ಲಿ ದೇಹಸ್ಥಿತಿ ಮತ್ತಷ್ಟು ಹದಗೆಟ್ಟಿತು. ಹಲವು ಬಾರಿ ಆಸ್ಪತ್ರೆಗೂ ದಾಖಲಿಸಲಾಗಿತ್ತು". ಮುಂಬೈನ ಕಂಡಿವಲಿಯಲ್ಲಿರುವ ನಿವಾಸದಲ್ಲಿ ರಾತ್ರಿ 9:30ರ ಸುಮಾರಿಗೆ ಹೃದಯಾಘಾತದಿಂದ ಅವರು ನಿಧನರಾಗಿದ್ದು, ಬುಧವಾರ ಅಂತ್ಯಸಂಸ್ಕಾರ ನಡೆಯಲಿದೆ.
ರಮಾನಂದ ಸಾಗರ್ ನಿದೇರ್ಶನದ ರಾಮಾಯಣ 1987ರಲ್ಲಿ ದೂರದರ್ಶನದಲ್ಲಿ ಜನಪ್ರಿಯ ಧಾರಾವಾಹಿಯಾಗಿತ್ತು. ಕಳೆದ ವರ್ಷ ಲಾಕ್ಡೌನ್ ಅವಧಿಯಲ್ಲಿ ಮತ್ತೆ ಡಿಡಿ ನ್ಯಾಷನಲ್ ಇದನ್ನು ಮರುಪ್ರಸಾರ ಮಾಡಿತ್ತು.