ನವದೆಹಲಿ: ರಾಜ್ಯಸಭೆಯ 12 ಸದಸ್ಯರನ್ನು ಅಮಾನತುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರ ವಿರುದ್ಧ ಕಿಡಿಕಾರಿದ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, "ನಿಮ್ಮ ಕೆಟ್ಟ ದಿನಗಳು ಬರಲಿದೆ(ಆಪ್ ಕೆ ಬುರೇ ದಿನ್ ಆಯೇಂಗೆ), ನಿಮ್ಮನ್ನು ಶಪಿಸುತ್ತಿದ್ದೇನೆ,'' ಎಂದು ಹೇಳಿದ ಘಟನೆ ನಡೆದಿದೆ.
ರಾಜ್ಯಸಭೆಯಲ್ಲಿ ನಾರ್ಕಾಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ತಿದ್ದುಪಡಿ) ಮಸೂದೆ ಚರ್ಚೆಯ ಸಂದರ್ಭ ಜಯಾ ಅವರ ವಾಗ್ದಾಳಿ ನಡೆದಿದೆ.
ನವೆಂಬರ್ 29ರಂದು ಚಳಿಗಾಲದ ಅಧಿವೇಶನದ ಆರಂಭದಲ್ಲಿ ವಜಾಗೊಂಡ 12 ಸಂಸದರ ಸಭಾಪತಿ ಭುವನೇಶ್ವರ್ ಕಲಿತಾ ಮತ್ತು ಆಡಳಿತ ಸದಸ್ಯರು ಯಾವುದೇ ಆಸಕ್ತಿ ವಹಿಸುತ್ತಿಲ್ಲ ಎಂಬುದು ಜಯಾ ದೂರು ಆಗಿತ್ತು. ಈ ವಿಚಾರವನ್ನು ಚರ್ಚಿಸಲೂ ಮನಸ್ಸು ಮಾಡುತ್ತಿಲ್ಲ ಕೆಲ ಕ್ಲರಿಕಲ್ ತಪ್ಪುಗಳ ಕುರಿತು ಚರ್ಚೆಗೆ ಮೂರ್ನಾಲ್ಕು ಗಂಟೆ ಕಳೆದಿದ್ದಾರೆ ಎಂದು ಜಯಾ ದೂರಿದರು.
"ನಮಗೆ ನ್ಯಾಯ ಬೇಕು. ನಮಗೆ ಅಲ್ಲಿಂದ ನ್ಯಾಯ ದೊರೆಯುವ ನಿರೀಕ್ಷೆಯಿಲ್ಲ, ನಿಮ್ಮಿಂದ ನಿರೀಕ್ಷಿಸಬಹುದೇ? ನೀವು ಸದನದ ಸದಸ್ಯರನ್ನು ಹಾಗೂ ಹೊರಗೆ ಕುಳಿತಿರುವ 12 ಮಂದಿಯನ್ನು ಹೇಗೆ ರಕ್ಷಿಸುತ್ತೀರಿ?'' ಎಂದು ಅವರು ಹೇಳಿದರು.
ಟ್ರೆಶರಿ ಬೆಂಚುಗಳಿಂದ ಯಾರೋ ಒಬ್ಬರು ಮಾಡಿದ ವೈಯಕ್ತಿಕ ಹೇಳಿಕೆಯಿಂದ ಕೆಂಡಾಮಂಡಲರಾದ ಜಯಾ ಮೇಲಿನಂತೆ ಕಿಡಿ ಕಾರಿದ್ದಾರೆ. "ನೀವೇನು ಹೇಳುತ್ತಿದ್ದೀರಿ? ಎದ್ದು ನಿಂತು ಮಾತನಾಡುವ ಧೈರ್ಯ ತೋರಿ?'' ಎಂದು ಅವರು ಹೇಳಿದರು.
ಅಸೂಕ್ತ ಪದಗಳನ್ನು ದಾಖಲೆಯಿಂದ ತೆಗೆದು ಬಿಡುವಂತೆ ಸೂಚಿಸಿದ ಸಭಾಪತಿ, "ಜಗಳ ಮಾಡುವ ಉದ್ದೇಶವಾದರೆ ಅದು ಇಲ್ಲಲ್ಲ. ಕ್ಷಮಿಸಿ,'' ಎಂದು ಹೇಳಿದರು.