ಬಿಹಾರ್: ಪ್ರಧಾನಿ ನರೇಂದ್ರ ಮೋದಿಯವರ ಮಹಾತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ಡಿಜಿಟಲ್ ಇಂಡಿಯಾ ಭಾರತದಲ್ಲೀಗ ಭಾರಿ ಸದ್ದು ಮಾಡುತ್ತಿದೆ. ನಗದು ರಹಿತ ವಹಿವಾಟು ಕೂಡ ಹೆಚ್ಚಾಗಿಯೇ ನಡೆಯುತ್ತಿದೆ. ಆದರೂ ಇದು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎನ್ನುವುದು ಅಷ್ಟೇ ಸತ್ಯ.
ಅದೇನೇ ಇದ್ದರೂ ಇಲ್ಲೊಬ್ಬ ಭಿಕ್ಷುಕ ಮಾತ್ರ ಡಿಜಿಟಲ್ ಇಂಡಿಯಾ ಯೋಜನೆಯನ್ನು ಚಾಚೂತಪ್ಪದೇ ಪಾಲಿಸುತ್ತಿದ್ದಾನೆ. ಇವನನ್ನು ನಿತ್ಯವೂ ನೋಡುವ ಮಂದಿ ಹುಬ್ಬೇರಿಸಿಕೊಂಡು ಹೋಗುತ್ತಿದ್ದಾರೆ.
ಬಿಹಾರದ ರಾಜು ಪಟೇಲ್ ಎನ್ನುವ 40 ವರ್ಷದ ಭಿಕ್ಷುಕನಿಗೆ ಭಿಕ್ಷೆ ಕೊಡುವುದಿದ್ದರೆ ಆತ ಇಟ್ಟುಕೊಂಡಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೇ ನೀಡಬೇಕು, ಹಾಗೆಯೇ ಭಿಕ್ಷೆಯನ್ನು ಈತ ಪಡೆದುಕೊಳ್ಳುವುದಿಲ್ಲ. ಇದು ಡಿಜಿಟಲ್ ಇಂಡಿಯಾ ಆಗಿರುವ ಕಾರಣ, ನಾನು ಈ ಯೋಜನೆಯ ಭಾಗವಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ರಾಜು.
ಬಿಹಾರದ ಬೆಟ್ಟೈ ರೈಲು ನಿಲ್ದಾಣದಲ್ಲಿ ನಿತ್ಯವೂ ಭಿಕ್ಷೆ ಬೇಡುವುದು ಇವನ ಕಾಯಕ. ಕುತ್ತಿಗೆಯಲ್ಲಿ ಕ್ಯೂರ್ ಕೋಡ್ ಅನ್ನು ನೇತುಹಾಕಿಕೊಂಡು, ಟ್ಯಾಬ್ ಇಟ್ಟುಕೊಂಡು ಈತ ಭಿಕ್ಷೆ ಬೇಡುತ್ತಾನೆ. ಮೊದಲಿನಿಂದ ನಾನು ಹಣವನ್ನೇ ಪಡೆಯುತ್ತಿದ್ದೆ. ಆದರೆ ಈಗ ಯಾರ ಬಳಿಯಾದರೂ ಭಿಕ್ಷೆ ಕೇಳಿದರೆ, ಅದರಲ್ಲಿಯೂ ಕರೊನಾ ಬಂದ ಬಳಿಕ ಕ್ಯಾಶ್ ಇಲ್ಲ, ಚಿಲ್ಲರೆ ಇಲ್ಲ ಎನ್ನುತ್ತಾರೆ. ಆದ್ದರಿಂದ ಬಹುತೇಕ ಕಡೆಗಳಲ್ಲಿ ಸ್ಕ್ಯಾನಿಂಗ್ ಸಿಸ್ಟಮ್ ಬಂದಿರುವ ಕಾರಣ, ನಾನೂ ಅದನ್ನೇ ಮಾಡುತ್ತಿದ್ದೇನೆ. ತುಂಬಾ ವರ್ಷಗಳಿಂದ ಇದೇ ಜಾಗದಲ್ಲಿ ಭಿಕ್ಷೆ ಬೇಡುತ್ತಿದ್ದೇನೆ. ಈಗ ಡಿಜಿಟಲ್ ಆಗಿದ್ದೇನೆ ಎನ್ನುತ್ತಾರೆ ರಾಜು.
ಭಿಕ್ಷೆ ಬೇಡಿದ ಬಳಿಕ ಈತ ರೈಲ್ವೆ ನಿಲ್ದಾಣದಲ್ಲಿಯೇ ಮಲಗುತ್ತಾನೆ. ಇದರಿಂದ ತನ್ನ ಹಣ ಕಳುವಾಗುತ್ತದೆ ಎನ್ನುವ ಭಯವೂ ಇರುವುದಿಲ್ಲ. ನಿರ್ಭೀತಿಯಿಂದ ಮಲಗಬಹುದು ಎನ್ನುತ್ತಾನೆ.
ಬ್ಯಾಂಕ್ ಖಾತೆ ತೆರೆಯಲು ಪ್ಯಾನ್ ಕಾರ್ಡ್ ಅಗತ್ಯ ಇದ್ದುದರಿಂದ ಅದನ್ನೂ ಮಾಡಿಸಿಕೊಂಡಿದ್ದೇನೆ. ನಾನು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಅಭಿಮಾನಿ ಕೂಡ ಎನ್ನುವ ರಾಜು, ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಯಂತೆ. ಏನೇ ಕೆಲಸವಿದ್ದರೂ ಸರಿ, ಅವರ ಮನ್ ಕೀ ಬಾತ್ ಕಾರ್ಯಕ್ರಮವನ್ನು ತಪ್ಪದೇ ಕೇಳುತ್ತೇನೆ. ಅವರಿಂದಲೇ ಪ್ರೇರೇಪಿತರಾಗಿ ಡಿಜಿಟಲ್ ಇಂಡಿಯಾ ಯೋಜನೆಗೆ ನನ್ನ ಸಣ್ಣ ಕೊಡುಗೆ ಎನ್ನುತ್ತಾನೆ!
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈತ ಭಾರಿ ವೈರಲ್ ಆಗಿದ್ದು, ಪರ- ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.