ತಿರುವನಂತಪುರ: ಕೊರೊನಾ ಪರೀಕ್ಷಾ ದರ ಇಳಿಕೆಗೆ ಲ್ಯಾಬ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ದರ ಇಳಿಕೆಗೆ ಅವಕಾಶ ನೀಡುವುದಿಲ್ಲ ಎಂದು ಲ್ಯಾಬ್ ಮಾಲೀಕರು ಸ್ಪಷ್ಟಪಡಿಸಿದ್ದಾರೆ. ಆರ್.ಟಿ.ಪಿ.ಸಿ.ಆರ್ ಮತ್ತು ಪ್ರತಿಜನಕ ಪರೀಕ್ಷೆಯ ದರದಲ್ಲಿನ ಕಡಿತದ ವಿರುದ್ಧ ಲ್ಯಾಬ್ ಮಾಲೀಕರು ಧ್ವನಿಯೆತ್ತಿ ಕಾನೂನು ಹೋರಾಟಕ್ಕೆ ಮುಂದಾಗುವ ಸೂಚನೆ ನೀಡಿದ್ದಾರೆ.
ಮೊದಲು ಆರ್.ಟಿ.ಪಿ.ಸಿ.ಆರ್ ಮತ್ತು ಪ್ರತಿಜನಕ ಪರೀಕ್ಷೆಗಳ ದರಗಳು ಕ್ರಮವಾಗಿ 500 ಮತ್ತು 300 ರೂ. ಇದ್ದವು. ಆದರೆ ಸರ್ಕಾರ ನಿನ್ನೆ 300 ಮತ್ತು 100 ರೂ. ನಿಗದಿಪಡಿಸಿ ಆದೇಶ ನೀಡಿತ್ತು. ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ ಲ್ಯಾಬ್ ಮಾಲೀಕರು. ಈ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿ ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದಿರುವರು.
ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಲ್ಯಾಬ್ ಮಾಲೀಕರು ಕಡಿಮೆ ವೆಚ್ಚದ ಸೇವೆಗಳನ್ನು ನೀಡಲು ಸಾಧ್ಯವಿಲ್ಲ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ಕಡಿಮೆ ಮಾಡಿರುವ ದರವನ್ನು ಹಿಂಪಡೆಯುವಂತೆ ಒತ್ತಾಯಿಸಿ ವೈದ್ಯಕೀಯ ಪ್ರಯೋಗಾಲಯ ಮಾಲೀಕರ ಸಂಘ ಮುಷ್ಕರಕ್ಕೆ ಮುಂದಾಗಿದೆ. ಪ್ರಯೋಗಾಲಯ ಮಾಲೀಕರ ಸಂಘವು ಆರ್.ಟಿ.ಪಿ.ಸಿ.ಆರ್. ಪರೀಕ್ಷಾ ದರವನ್ನು 900 ರೂ.ಗೆ ಮತ್ತು ಪ್ರತಿಜನಕ ಪರೀಕ್ಷಾ ದರವನ್ನು 250 ರೂ.ಗೆ ಏರಿಸಬೇಕೆಂದು ಒತ್ತಾಯಿಸಿದೆ. ಫೆ.14ರಂದು ರಾಜ್ಯದ ಡಿಎಂಒ ಕಚೇರಿಗಳಿಗೆ ಮುತ್ತಿಗೆ ಹಾಕುವುದಾಗಿ ಸಂಘಟನೆ ತಿಳಿಸಿದೆ.
ಫೆಬ್ರವರಿ 9 ರಂದು, ರಾಜ್ಯ ಆರೋಗ್ಯ ಇಲಾಖೆಯು ಕೊರೋನಾ ಪರೀಕ್ಷೆಗಳು ಮತ್ತು ಪಿಪಿ ಕಿಟ್ಗಳು, ಎನ್. 95 ಮಾಸ್ಕ್ಗಳಂತಹ ಸುರಕ್ಷತಾ ಸಾಧನಗಳಿಗೆ ದರ ಕಡಿತದ ಆದೇಶ ನೀಡಿತ್ತು.