ಕುಂಬಳೆ: ಸಂಗೀತೋಪಕರಣ ವಾದಕನಾಗಿ ಬಹುಮುಖೀ ಆಸಕ್ತಿಗಳಿಂದ ಸ್ನೇಹಜೀವಿಯಾಗಿ ಬದುಕಿದ ಕಲಾವಿದ ದಿ. ಸದಾಶಿವ ಅನಂತಪುರ ಅವರ ಪ್ರಥಮ ಸಂಸ್ಮರಣೆಯೊಂದಿಗೆ ಸಂಸ್ಮರಣಾ ವೇದಿಕೆಯ ಉದ್ಘಾಟನೆ ಮತ್ತು ಸನ್ಮಾನ, ತಾಳಮದ್ದಳೆ ಎ.3ರಂದು ಅನಂತಪುರ ದೇವಾಲಯದ ಸಭಾಭವನದಲ್ಲಿ ಜರುಗಲಿದೆ.
ಅಪರಾಹ್ನ2.30ರಿಂದ ನಡೆಯುವ ಕಾರ್ಯಕ್ರಮ ಮತ್ತು ಸದಾಶಿವ ಅನಂತಪುರ ಸಂಸ್ಮರಣ ವೇದಿಕೆಯನ್ನು ಮಂಗಳೂರಿನ ಖ್ಯಾತ ವೈದ್ಯ, ಕಲಾವಿದ ಡಾ| ಜೆ.ಎನ್ .ಭಟ್ ಉದ್ಘಾಟಿಸುವರು. ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾವ್ ಸಂಸ್ಮರಣಾ ಭಾಷಣ ಮಾಡುವರು. ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ನಿವೃತ್ತ ಪ್ರಾಧ್ಯಾಪಕ, ನಿಟ್ಟೆ ಯೂನಿವರ್ಸಿಟಿ ಪರೀಕ್ಷಾಂಗದ ನಿವೃತ್ತ ಕುಲಸಚಿವ ಡಾ| ಎ.ಪಿ.ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕಾಸರಗೋಡಿನ ಹಿರಿಯ ಸಂಗೀತಜ್ಞೆ, ಪ್ರಸಿದ್ಧ ಆಲಂಪಾಡಿ ಮನೆತನದ ರಾಧಾಮುರಳೀಧರ್ ಅವರನ್ನು ಸನ್ಮಾನಿಸಲಾಗುವುದು.
ಹಿರಿಯ ಪತ್ರಕರ್ತ, 'ಕಣಿಪುರ' ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಪ್ರಸ್ತಾವಿಕ ಮಾತನಾಡಿ ಅಭಿನಂದನಾ ಭಾಷಣ ಮಾಡುವರು. ನಿವೃತ್ತ ಪೋಲಿಸ್ ಅಧಿಕಾರಿ ಸುಕುಮಾರ ಅನಂತಪುರ, ಅನಂತಪುರ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಉದಯ ಕುಮಾರ್ ಗಟ್ಟಿ, ಪುತ್ತಿಗೆ ಗ್ರಾ. ಪಂ ಸದಸ್ಯ ಜನಾರ್ಧನ ಪೂಜಾರಿ ಕಣ್ಣೂರು ಉಪಸ್ಥಿತರಿರುವರು. ಶೇಣಿ ವೇಣುಗೋಪಾಲ ಭಟ್ ಕಾರ್ಯಕ್ರಮ ನಿರೂಪಿಸುವರು.
ಸಂಜೆ 4ರಿಂದ 'ಪಾರ್ಥ ಸಾರಥ್ಯ' ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಡಾ. ಸತೀಶ ಪುಣಿಂಚಿತ್ತಾಯ ಬಳಗ ಮತ್ತು ಅರ್ಥದಾರಿಗಳಾಗಿ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ಕುಂಬ್ಳೆ ಶ್ರೀಧರ ರಾವ್, ಶೇಣಿ ವೇಣುಗೋಪಾಲ ಭಟ್, ಕೆಕ್ಕಾರು ಆನಂದ ಭಟ್ ಪಾಲ್ಗೊಳ್ಳುವರು.