ಕಾಸರಗೋಡು: ರಂಗ ಕುಟೀರ ಕಾಸರಗೋಡು ವತಿಯಿಂದ ವಿಶ್ವ ರಂಗಭೂಮಿ ದಿನವನ್ನು ಕೂಡ್ಲು ಪಾರೆಕಟ್ಟದ ರಂಗ ಕುಟೀರದಲ್ಲಿ ಆಚರಿಸಲಾಯಿತು.ರಂಗಕರ್ಮಿ, ವಕೀಲ ಟಿ.ವಿ ಗಂಗಾಧರನ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅತಿಯಾದ ಮೊಬೈಲ್ ಬಳಕೆ ಹಾಗೂ ಇತರ ಜಂಜಾಟಗಳ ನಡುವೆ ರಂಗಭೂಮಿಗೆ ಈ ಹಿಂದಿನ ಪ್ರೋತ್ಸಾಹ ಲಭ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.ರಂಗಭೂಮಿಯ ಪುನಶ್ಚೇತನಕ್ಕೆ ಹೊಸ ಕಾರ್ಯಯೋಜನೆ ತಯಾರಿಸಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು.
ಕೇರಳ ತುಳು ಅಕಾಡಮಿ ಅಧ್ಯಕ್ಷ ಎಂ. ಉಮೇಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗ ಚಟುವಟಿಕೆ ಎಂದಿಗೂ ನಿಂತ ನೀರಾಗದೆ, ಪ್ರತಿಭಾನ್ವಿತರು ಸಕ್ರಿಯವಾಗುವುದರ ಜತೆಗೆ ನಿರಂತರ ಪಾಲ್ಗೊಳ್ಳುವಿಕೆ ಅನಿವಾರ್ಯ ಎಂದು ತಿಳಿಸಿದರು.
ಪತ್ರಕರ್ತ ಎಂ.ನಾ ಚಂಬಲ್ತಿಮಾರ್ ಹಾಗೂ ಯಕ್ಷಗಾನ ಅರ್ಥಧಾರಿ ನರಸಿಂಹ ಬಲ್ಲಾಳ್ ಕೆ. ಅವರು ನಾಟಕ ಮತ್ತು ಯಕ್ಷಗಾನದ ಆಗುಹೋಗುಗಳು ಮತ್ತು ಅವುಗಳಿಂದ ಸಮಾಜದ ಮೇಲೆ ಉಂಟಾಗುವ ಸತ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದರು. ದಯಾನಂದ ಕುಂಜತ್ತೂರು ಮಾಡ ಹಾಗೂ ದಿವಾಕರ ಅಶೋಕನಗರ ಉಪಸ್ಥಿತರಿದ್ದರು.ಹರಿಕಾಂತ ಕಾಸರಗೋಡು ವಿಶ್ವರಂಗಭೂಮಿ ದಿನಾಚರಣೆಯ ಸಂದೇಶ ವಾಚಿಸಿದರು. ಜಯಶ್ರೀ ದಿವಾಕರ್, ನರೇಂದ್ರ ಪಿಲಿಕುಂಜೆ, ಭಾರತಿಬಾಬು ರಂಗಗೀತೆಗಳನ್ನು ಹಾಡಿದರು. ಗಂಗಾಧರ್ ನೀಲೇಶ್ವರ ಸ್ವಾಗತಿಸಿದರು. ಹಿರಿಯ ರಂಗ ಕಲಾವಿದ ವಾಸು ಬಾಯಾರ್ ಕಾರ್ಯಕ್ರಮ ನಿರೂಪಿಸಿದರು. ಭಾರತೀಬಾಬು ವಂದಿಸಿದರು.