ನವದೆಹಲಿ: ಗುಜರಾತ್ ವಿಧಾನಸಭೆ ಮತ್ತು 2024 ರ ಲೋಕಸಭೆ ಚುನಾವಣೆಗೆ ಪಕ್ಷದೊಂದಿಗೆ ಕೆಲಸ ಮಾಡುವ ಸಾಧ್ಯತೆ ಕುರಿತು ಚರ್ಚಿಸಲು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ನೊಂದಿಗೆ ಮತ್ತೆ ಮಾತುಕತೆ ನಡೆಸುತ್ತಿದ್ದಾರೆ.
ಕಿಶೋರ್ ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆದಿದೆ. ಈಗಾಗಲೇ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿರುವುದಾಗಿ ಮೂಲಗಳು ತಿಳಿಸಿವೆ. ಕಿಶೋರ್ ಚುನಾವಣಾ ಸಲಹೆಗಾರರಾಗಿ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ಗೆ ಸೇರಲು ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಅವು ಹೇಳಿವೆ.
ಪ್ರಶಾಂತ್ ಕಿಶೋರ್ ಪಕ್ಷಕ್ಕೆ ಸೇರಲು ಮತ್ತು ಚುನಾವಣೆಗೆ ಹೋಗುವ ಮೊದಲು ಅದನ್ನು ಪುನರ್ ಸಂಘಟಿಸಲು ಬಯಸುತ್ತಾರೆ. ಈ ಬಾರಿ ಎಲ್ಲವೂ ಕಾರ್ಯರೂಪಕ್ಕೆ ಬರುತ್ತದೆ ಎಂಬ ಭರವಸೆ ಹೊಂದಿದ್ದೇವೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.
ತನ್ನಗಾಗಿ ಚುನಾವಣೆಗಾಗಿ ಪ್ರಧಾನ ಕಾರ್ಯದರ್ಶಿ ಹುದ್ದೆ ಸೃಷ್ಟಿಸಬೇಕೆಂಬ ಪ್ರಶಾಂತ್ ಕಿಶೋರ್ ಪ್ರಸ್ತಾಪವನ್ನು ಕಳೆದ ವರ್ಷ ಕಾಂಗ್ರೆಸ್ ತಿರಸ್ಕರಿಸಿತ್ತು. ಕಿಶೋರ್ ಸಲಹೆಗಾರರಾಗಿ ಪಕ್ಷ ಚುನಾವಣೆಗೆ ಹೋರಾಡಲು ಸಹಾಯ ಮಾಡಲಿ ಆದರೆ ಚುನಾವಣೆಯ ಸಂಪೂರ್ಣ ಉಸ್ತುವಾರಿಯನ್ನು ನೀಡಬಾರದು ಎಂದು ಪಕ್ಷದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಅಭ್ಯರ್ಥಿಗಳನ್ನು ಆಯ್ಕೆ ಮಾಡುವ, ಮತದಾರರನ್ನು ಸಜ್ಜುಗೊಳಿಸುವ ಮತ್ತು ಚುನಾವಣಾ ವಿಷಯಗಳನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಕಿಶೋರ್ ಅವರಿಗೆ ವಹಿಸಿದರೆ, ಇತರ ಪ್ರಧಾನ ಕಾರ್ಯದರ್ಶಿಗಳು ಏನು ಮಾಡುತ್ತಾರೆ ಎಂಬುದು ಅವರ ವಾದವಾಗಿತ್ತು.
ಕಿಶೋರ್ ಅವರ ಬೇಡಿಕೆಯನ್ನು ಒಪ್ಪಿಕೊಳ್ಳುವುದರಿಂದ ಇಡೀ ಪಕ್ಷದ ಸಂಘಟನೆ ನಿಷ್ಪ್ರಯೋಜಕವಾಗುತ್ತದೆ ಎಂದು ಅವರು ಭಾವಿಸಿದ್ದಾರೆ.ಹೀಗಾಗಿ ಪಕ್ಷವು ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಇದರಿಂದ ಕಿಶೋರ್ ಟ್ವೀಟರ್ ನಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಯಶಸ್ಸು ಸಿಕ್ಕ ನಂತರ ಪಕ್ಷ ಸೇರ್ಪಡೆಗೆ ಕಿಶೋರ್ ಒಲವು ವ್ಯಕ್ತಪಡಿಸಿದ್ದರು.
ಕಿಶೋರ್ ಅವರ ಬದ್ಧತೆ ಮತ್ತು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುವ ಅವರ ಸಾಮರ್ಥ್ಯದ ಬಗ್ಗೆ ಕಾಂಗ್ರೆಸ್ನ ಒಂದು ವರ್ಗ ಬೆಂಬಲ ವ್ಯಕ್ತಪಡಿಸುತ್ತಿದೆ. ಅವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವುದು ಪಕ್ಷಕ್ಕೆ ಉತ್ತಮ ಎಂದು ಅದು ಸಲಹೆ ನೀಡಿದೆ.