ತಿರುವನಂತಪುರ: ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರಿಂದ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸಲು ಬಯಸುವುದಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ವಿಎಂ ಸುಧೀರನ್ ಹೇಳಿದ್ದಾರೆ. ರಾಜ್ಯಸಭಾ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ತಮ್ಮ ಹೆಸರನ್ನು ಎಳೆದು ತರುವುದು ಬೇಡವೆಂದು ಸುಧೀರನ್ ಫೇಸ್ ಬುಕ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಎ.ಕೆ.ಆಂಟನಿ ಅವರಿಂದ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಸಂಬಂಧಿಸಿದಂತೆ ನನ್ನ ಹೆಸರನ್ನು ಎಳೆದು ತರಬೇಡಿ ಎಂದು ವಿನಂತಿಸುತ್ತೇನೆ. ನಾನು ಸಂಸದೀಯ ರಾಜಕೀಯಕ್ಕೆ ರಾಜೀನಾಮೆ ನೀಡಿ ಬಹಳಷ್ಟು ಕಾಲವೇ ಆಗಿದೆ. ಯಾವುದೇ ಸಂದರ್ಭದಲ್ಲಿ ಮತ್ತೆ ಅಂತಹ ಪ್ರಯತ್ನಕ್ಕೆ ತಾನಿಲ್ಲ. ಆದ್ದರಿಂದ ದಯವಿಟ್ಟು ರಾಜ್ಯಸಭಾ ಸ್ಥಾನದ ಚರ್ಚೆಯಿಂದ ನನ್ನನ್ನು ಹೊರಗಿಡಬೇಕೆಂಬುದು ನನ್ನ ಮನವಿಯಾಗಿದೆ ಎಂದು ಸುಧೀರನ್ ಪೆÇೀಸ್ಟ್ನಲ್ಲಿ ತಿಳಿಸಿದ್ದಾರೆ.
ಎಕೆ ಆಂಟನಿ ಅವರಿಂದ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಕೆಪಿಸಿಸಿ ಮಾಜಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್, ಯುಡಿಎಫ್ ಸಂಚಾಲಕ ಎಂಎಂ ಹಸನ್ ಮತ್ತು ವಿಎಂ ಸುಧೀರನ್ ಅವರ ಹೆಸರು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸುಧೀರನ್ ಪ್ರತಿಕ್ರಿಯೆಯೊಂದಿಗೆ ರಂಗಕ್ಕೆ ಬಂದಿದ್ದಾರೆ.
ಇನ್ನು ಮುಂದೆ ಸ್ಪರ್ಧಿಸುವುದಿಲ್ಲ ಎಂದು ಎ.ಕೆ.ಆಂಟನಿ ಸ್ಪಷ್ಟಪಡಿಸಿದ ಬೆನ್ನಲ್ಲೇ ಮುಲ್ಲಪ್ಪಲ್ಲಿ ರಾಮಚಂದ್ರನ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ.ವಿ.ಥಾಮಸ್ ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತಿ ತೋರಿದ್ದರು. ಕೆ.ವಿ.ಥಾಮಸ್ ಅವರು ಅನುಭವಿ ನಾಯಕರಾಗಿದ್ದು, ಪಕ್ಷವೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು.
ರಾಜ್ಯಸಭಾ ಸ್ಥಾನಗಳಿಗೆ ಸ್ಪರ್ಧಿಸಲು ಯುವಕರಿಗೆ ಅವಕಾಶ ನೀಡುವ ಬಗ್ಗೆ ಪಕ್ಷವು ಚರ್ಚಿಸಿ ನಿರ್ಧರಿಸುವ ಸಾಧ್ಯತೆಯಿದೆ. ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಮರಳಿದ ಮಾಜಿ ಶಾಸಕ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ವಿಟಿ ಬಲರಾಮ್ ಹೆಸರು ಮತ್ತು ಚೆರಿಯನ್ ಫಿಲಿಪ್ ಅವರ ಹೆಸರು ಕೂಡಾ ಕೇಳಿಬರುತ್ತಿದೆ. ಯುವಕರನ್ನು ರಾಜ್ಯಸಭೆಗೆ ಕಳುಹಿಸಲು ಕಾಂಗ್ರೆಸ್ ನಿರ್ಧರಿಸಿದರೆ, ಮೊದಲ ಪರಿಗಣನೆಯು ಬಲರಾಮ್ ಅವರಿಗೇ ಅಥವಾ ಎಂ ಲಿಜುಗೆ ಅವಕಾಶ ಸಿಗಬಹುದು ಎನ್ನಲಾಗಿದೆ.

