ಎಡನೀರು: ಗಡಿನಾಡು ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳಿಗೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ನಿರಂತರ ಧ್ವನಿಯಾಗಲಿರುವುದಾಗಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ್ ತಿಳಿಸಿದ್ದಾರೆ.
ಅವರು ಶುಕ್ರವಾರ ಎಡನೀರು ಮಠದ ಸಭಾಂಗಣದಲ್ಲಿ ಕಾಸರಗೋಡಿನ ವಿವಿಧ ಕನ್ನಡ ಸಂಘಸಂಸ್ಥೆಗಳ ಪದಾಧಿಕಾರಿಗಳು, ಕನ್ನಡ ಶಾಲಾ ಕಾಲೇಜುಗಳ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸಿ ಮಾತನಾಡಿದರು. ಕರ್ನಾಟಕ 63 ತಾಲೂಕುಗಳನ್ನು ಹಾಗೂ 19ಜಿಲ್ಲೆಗಳನ್ನು ಗಡಿಭಾಗದಲ್ಲಿ ಹೊಂದಿದೆ. ಗಡಿನಾಡ ಕನ್ನಡಿಗರ ಸಾಂಸ್ಕøತಿಕ,ಶೈಕ್ಷಣಿಕ, ಸಾಹಿತ್ಯಿಕ ಅಭಿವೃದ್ಧಿಗೆ ಪ್ರಾಧಿಕಾರ ನೆರವನ್ನು ನೀಡುತ್ತಾ ಬರುತ್ತಿದೆ. 2012-13ರಿಂದ ಇದುವರೆಗೆ ಕಾಸರಗೋಡು ಜಿಲ್ಲೆಯ ಶಾಲೆಗಳಿಗೆ 8ಕೋಟಿಗೂ ಮಿಕ್ಕಿ ಅನುದಾನ ನೀಡಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಸ್ಥಳನಾಮಗಳ ಮಲಯಾಳೀಕರಣವನ್ನು ಸಹಿಸಲಾಗದು. ಈ ಬಗ್ಗೆ ಕೇರಳ ಸರ್ಕಾರದೊಂದಿಗೆ ಹಾಗೂ ಕಾಸರಗೋಡು ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಲಾಗಿದೆ. ಕನ್ನಡಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರ ನೇಮಕ ವಿರುದ್ಧವೂ ಪ್ರಾಧಿಕಾರಿ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. ಇದು ಭಾಷಾ ಅಲ್ಪಸಂಖ್ಯಾತರ ಸಂವಿಧಾನಾತ್ಮಕ ವ್ಯವಸ್ಥೆಗೆ ವ್ಯತಿರಿಕ್ತವಾಗಿದೆ. ಕಾಸರಗೋಡಿನ ಕನ್ನಡಿಗರ ಸಮಸ್ಯೆ ಅರಿತುಕೊಳ್ಳುವ ನಿಟ್ಟಿನಲ್ಲಿ ನೋಡೆಲ್ ಅಧಿಕಾರಿಯೊಬ್ಬರನ್ನು ನೇಮಿಸಿಕೊಳ್ಳುವ ಬಗ್ಗೆ ಪ್ರಾಧಿಕಾರ ಕ್ರಮ ಕೈಗೊಳ್ಳಲಿರುವುದಾಗಿ ತಿಳಿಸಿದರು. ಜಿಲ್ಲೆಯ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಕನ್ನಡಿಗರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಕನ್ನಡಿಗರ ಸಮಸ್ಯೆಗೆ ಪ್ರಾಧಿಕಾರ ವತಿಯಿಂದ ಪ್ರತ್ಯೇಕ ಕಾನೂನು ಹೋರಾಟ ನಡೆಸುವ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಅಭಿಪ್ರಾಯ ಕೇಳಿಬಂತು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ಕುಮಾರ್ ಕಲ್ಕೂರ ಉಪಸ್ಥಿತರಿದ್ದರು.