ಕಾಸರಗೋಡು :ಕೇರಳ ರಾಜ್ಯದ ಅಲ್ಪಸಂಖ್ಯಾತ ಭಾಷಾವಾರು ಪ್ರದೇಶವಾದ ಕಾಸರಗೋಡು-ಕನ್ನಡಿಗರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಹಾಗೂ 2022-23ನೇ ಸಾಲಿನ ಬಜೆಟ್ ಘೋಷಣೆಯಾದ ಸಾಂಸ್ಕೃತಿಕ ಭವನ ಕಟ್ಟಡ ಕಟ್ಟಲು ಕಾಸರಗೋಡಿನಲ್ಲಿ ಉಚಿತವಾಗಿ ಸರ್ಕಾರಿ ನಿವೇಶನ ನೀಡುವಂತೆ ಕಾಸರಗೋಡಿನ ಜಿಲ್ಲಾಧಿಕಾರಿ ಶ್ರೀಮತಿ ಭಂಡಾರಿ ಸ್ವಾಗತ ರಣವೀರಚಂದ ರವರನ್ನು ಕರ್ನಾಟಕ ಗಡಿಪ್ರದೇಶ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ ಹಾಗೂ ಕಾರ್ಯದರ್ಶಿಗಳಾದ ಪ್ರಕಾಶ ಮತ್ತೀಹಳ್ಳಿ ರವರು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಇಂದು ಕಾಸರಗೋಡು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಸಿ ಸೋಮಶೇಖರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಜಿಲ್ಲಾಧಿಕಾರಿಗಳು, ಶ್ರೀಮತಿ ಭಂಡಾರಿ ಸ್ವಾಗತ ರಣವೀರಚಂದ್, ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್ ಮತ್ತೀಹಳ್ಳಿ ರವರು ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಎಡನೀರು ಮಠದಲ್ಲಿ ಕಾಸರಗೋಡಿನ ಪ್ರಮುಖ ಸಂಘ-ಸಂಸ್ಥೆಗಳ ಹಾಗೂ ಕನ್ನಡ ಶಾಲಾ ಕಾಲೇಜುಗಳ ಪದಾಧಿಕಾರಿಗಳೊಂದಿಗೆ ಸಂವಾದ ಹಾಗೂ ಸಭೆ ನಡೆಸಿ, ಕಾಸರಗೋಡಿನ ಗಡಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು.
ಕಯ್ಯಾರ ಕಿಞ್ಞಣ್ಣ ರೈ ಹೆಸರಿನಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣವನ್ನು ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಈ ವರ್ಷ ಕೈಗೆತ್ತಿಕೊಳ್ಳಲಾಗುವುದು ಎಂದು ಡಾ. ಸಿ.ಸೋಮಶೇಖರ ಅಧ್ಯಕ್ಷರು ತಿಳಿಸಿದರು. ಪ್ರಕಾಶ ಮತ್ತೀಹಳ್ಳಿ ಕಾರ್ಯದರ್ಶಿ ಗಡಿ ಪ್ರಾಧಿಕಾರ, ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ರವರು ಉಪಸ್ಥಿತರಿದ್ದರು.
ಕಾಸರಗೋಡಿನ ಕನ್ನಡಿಗರ ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಅಭಿವೃದ್ಧಿ ಪಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಸರಗೋಡಿನಲ್ಲಿ ಸಾಂಸ್ಕೃತಿಕ ಭವನ ಸ್ಥಾಪನೆ ಬಗ್ಗೆ ಅತ್ಯಂತ ಆಸಕ್ತಿ ತೋರಿದ್ದಾರೆ.
(ಚಿತ್ರ: ಶ್ರೀಕಾಂತ್ ಕಾಸರಗೋಡು)