ನವದೆಹಲಿ: 1971ರ ಯುದ್ಧದ ನಂತರ ಪಾಕಿಸ್ತಾನವು ಯುದ್ಧ ಕೈದಿಗಳಾಗಿ (ಪಿಒಡಬ್ಲ್ಯು) ಅಕ್ರಮವಾಗಿ ಬಂಧನದಲ್ಲಿ ಇರಿಸಲಾಗಿರುವ ತಮ್ಮ ಪತಿ ಮತ್ತು ಇತರ ಸೇನಾ ಅಧಿಕಾರಿಗಳನ್ನು ಭಾರತಕ್ಕೆ ವಾಪಸು ಕಳುಹಿಸುವಂತೆ ಕೋರಿ ಭಾರತೀಯ ಸೇನಾ ಅಧಿಕಾರಿಯ ಪತ್ನಿಯೊಬ್ಬರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಗೆ ನೀಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರಿದ್ದ ನ್ಯಾಯಪೀಠವು ಜೈಲಿನಲ್ಲಿರುವ ಮೇಜರ್ ಕನ್ವಲ್ಜಿತ್ ಸಿಂಗ್ ಅವರ ಪತ್ನಿ ಜಸ್ಬೀರ್ ಕೌರ್ ಅವರ ಮನವಿಯ ಮೇಲೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದ್ದು, ಮೂರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಜಿನೀವಾ ಸಮಾವೇಶದ ಒಪ್ಪಂದವನ್ನು ಉಲ್ಲಂಘಿಸಿ, ಯುದ್ಧ ಕೈದಿಗಳನ್ನು ಪಾಕಿಸ್ತಾನವು ಹಿಂಸೆ ನೀಡಿ ಬಂಧನದಲ್ಲಿರಿಸಿದೆ. ಅವರನ್ನು ಬಿಡುಗಡೆ ಮಾಡಲು ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಕೋರಿದೆ.
ಅರ್ಜಿದಾರರಾದ ಜಸ್ಬೀರ್ ಕೌರ್ ಪರ ವಾದ ಮಂಡಿಸಿದ ವಕೀಲ ನಮಿತ್ ಸಕ್ಸೇನಾ ಅವರು, ಕಳೆದ 50 ವರ್ಷಗಳಲ್ಲಿ ಯುದ್ಧ ಕೈದಿಗಳ ಬಿಡುಗಡೆಗಾಗಿ ಹೆಚ್ಚಿನ ಪ್ರಯತ್ನಗಳು ನಡೆದಿಲ್ಲ ಎಂದು ಹೇಳಿದರು.