ಬದಿಯಡ್ಕ: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಶ್ರೀ ಎಡನೀರು ಸಂಸ್ಥಾನದ ಆಶ್ರಯದಲ್ಲಿ, ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು ಇದರ ಸಹಯೋಗದೊಂದಿಗೆ ಎಡನೀರು ಶ್ರೀ ಮಠದ ಸಭಾಂಗಣದಲ್ಲಿ ಇದೆ ಎಪ್ರಿಲ್ 4 ರಂದು ಬೆಳಿಗ್ಗೆ 9:30 ರಿಂದ ಸಂಜೆ 7 ರ ತನಕ ಪುಣ್ಯಸ್ಮೃತಿ,ಕೃತಿ ವಿಮರ್ಶೆ,ಕೃತಿ ಮತ್ತು ಸಾಕ್ಷ್ಯಚಿತ್ರ ಬಿಡುಗಡೆ,ಹಾಗೂ ಕಿರಿಯ ಹಿರಿಯ ಕಲಾವಿದರ ತಾಳಮದ್ದಳೆ ನಡೆಯಲಿದೆ.
ಕಾರ್ಯಕ್ರಮದ ಆರಂಭದಲ್ಲಿ ಬೆಳಗ್ಗೆ ಒಂಬತ್ತೂವರೆಗೆ ಸಿರಿಚಂದನ ಕನ್ನಡ ಯುವಬಳಗದ ಕಲಾವಿದರಿಂದ 'ಕರ್ಣಾರ್ಜುನ' ಯಕ್ಷಗಾನ ತಾಳಮದ್ದಳೆಯು ನಡೆಯಲಿದೆ.ಹಿಮ್ಮೇಳದಲ್ಲಿ ಸಚಿನ್ ಶೆಟ್ಟಿ ಕುದ್ರೆ ಪಾಡಿ, ಪುಂಡಿಕೈ ರಾಜೇಂದ್ರ ಪ್ರಸಾದ್ ಹಾಗೂ ಶ್ರೀಸ್ಕಂದ ದಿವಾಣ ,ಮುಮ್ಮೇಳದಲ್ಲಿ ದಿವಾಕರ ಬಲ್ಲಾಳ್, ಮನೋಜ್ ಎಡನೀರು,ಕಾರ್ತಿಕ್ ಪಡ್ರೆ ಹಾಗೂ ವಿನಯ ಚಿಗುರುಪಾದೆ ಭಾಗವಹಿಸುವರು.
ಬೆಳಗ್ಗೆ ಹನ್ನೊಂದುವರೆಗೆ ಎಡನೀರುಶ್ರೀಗಳಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಸಭಾಕಾರ್ಯಕ್ರಮವನ್ನು ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷರಾದ ಡಾ.ಜಿ.ಎಲ್ ಹೆಗಡೆ ಕುಮಟಾ ಅಧ್ಯಕ್ಷಸ್ಥಾನವನ್ನು ವಹಿಸಲಿರುವರು.ಹಿರಿಯ ವಿದ್ವಾಂಸರಾದ ಡಾ.ಎಂ ಪ್ರಭಾಕರ ಜೋಶಿ , ಬ್ರಹ್ಮೈಕ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪುಣ್ಯಸ್ಮೃತಿ ಮಾಡುವರು.ಬಳಿಕ ಎರಡು ಕೃತಿಗಳ ವಿಮರ್ಶೆ ನಡೆಯಲಿದೆ.ಡಾ.ರಮಾನಂದ ಬನಾರಿಯವರ 'ಯಕ್ಷಗಾನ ಸಂವಾದ ಭೂಮಿಕೆ' ಕೃತಿಯ ಕುರಿತು ಯಕ್ಷಗಾನ ಕಲಾವಿದರಾದ ಜಯಪ್ರಕಾಶ ಶೆಟ್ಟಿ ಪೆರ್ಮುದೆ ಮಾತನಾಡುವರು.ಅದರಂತೆ ಪೆÇ್ರ ಎಂ.ಎ ಹೆಗಡೆ ಹಾಗೂ ಯೋಗೀಶ ರಾವ್ ಚಿಗುರುಪಾದೆ ಸಂಪಾದಕತ್ವದಲ್ಲಿ ಪ್ರಕಟಗೊಂಡ ' ಪಾರ್ತಿಸುಬ್ಬ ಬದುಕು- ಬರಹ' ಕೃತಿಯ ಕುರಿತು ಸಾಹಿತಿಗಳೂ ವಿಮರ್ಶಕರೂ ಆದ ರಾಧಾಕೃಷ್ಣ ಉಳಿಯತ್ತಡ್ಕ ಮಾತನಾಡುವರು.
ಯಕ್ಷಗಾನ ಅಕಾಡಮಿಯ ಸದಸ್ಯರಾದ ದಾಮೋದರ ಶೆಟ್ಟಿ,ಹಿರಿಯ ಸಾಹಿತಿಗಳಾದ ಡಾ.ರಮಾನಂದ ಬನಾರಿ ಹಾಗೂ ಸಿರಿಚಂದನ ಯುವಬಳಗದ ಕಾರ್ಯದರ್ಶಿಗಳಾದ ಕು.ಅನುರಾಧ ಕಲ್ಲಂಗೋಡ್ಲು ಕಾರ್ಯಕ್ರಮಕ್ಕೆ ಶುಭಕೋರಿ ಮಾತನಾಡುವರು.ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಯೋಗೀಶ ರಾವ್ ಚಿಗುರುಪಾದೆ, ಸಿರಿಚಂದನ ಕನ್ನಡ ಯುವಬಳಗದ ಮಾರ್ಗದರ್ಶಕ ಡಾ.ರತ್ನಾಕರ ಮಲ್ಲಮೂಲೆ, ಬಳಗದ ಅಧ್ಯಕ್ಷ ಕಾರ್ತಿಕ್ ಪಡ್ರೆ, ಸದಸ್ಯರಾದ ಕು.ಸುನೀತಾ ಮಯ್ಯ, ಕೋಶಾಧಿಕಾರಿ ಸುಬ್ರಹ್ಮಣ್ಯ ಹೇರಳ ಉಪಸ್ಥಿತರಿರುವರು.
ಮಧ್ಯಾಹ್ನ ಬೋಜನವಿರಾಮದ ಬಳಿಕ ಹಿರಿಯ ಕಲಾವಿದರ ಕೂಡುವಿಕೆಯಲ್ಲಿ ಕೃಷ್ಣಸಂಧಾನ ಎಂಬ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ತಲ್ಪಣಾಜೆ ವೆಂಕಟ್ರಮಣ ಭಟ್,ಪುಂಡಿಕೈ ರಾಜೇಂದ್ರ ಪ್ರಸಾದ್,ಹಾಗೂ ಶ್ರೀಸ್ಕಂದ ದಿವಾಣ ಪಾಲುಪಡೆಯುವರು ಮುಮ್ಮೇಳದಲ್ಲಿ ಬೆಳ್ಳಿಗೆ ನಾರಾಯಣ ಮಣಿಯಾಣಿ,ರಾಜೇಂದ್ರ ಕಲ್ಲೂರಾಯ ಎಡನೀರು,ದಿವಾಣ ಶಿವಶಂಕರ ಭಟ್,ಹಾಗೂ ಬಾಲಕೃಷ್ಣ ಆಚಾರಿ ನೀರ್ಚಾಲು ಭಾಗವಹಿಸುವರು .
ಸಂಜೆ ಐದುಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ.ಜಿ.ಎಲ್ ಹೆಗಡೆ ಕುಮಟಾ ಅಧ್ಯಕ್ಷತೆಯನ್ನು ವಹಿಸುವರು.ಶ್ರೀ ಎಡನೀರು ಶ್ರೀಪಾದಂಗಳವರ ದಿವ್ಯಹಸ್ತದಿಂದ ಹಿರಿಯ ಅರ್ಥಧಾರಿಗಳಾದ ಶ್ರೀ ಮೂಡಂಬೈಲು ಗೋಪಾಲಕೃಷ್ಣ ಶಾಸ್ತಿಗಳ ಬಗೆಗಿನ ಸಾಕ್ಷ್ಯಚಿತ್ರ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಕದ್ರಿ ನವನೀತ ಶೆಟ್ಟಿಯವರಿಂದ ಸಂಪಾದಿತವಾದ 'ತುಳು ಯಕ್ಷಗಾನ ಪ್ರಸಂಗ ಸಂಪುಟ ಭಾಗ - _2' ಕೃತಿ ಬಿಡುಗಡೆಗೊಳ್ಳಲಿದೆ.ಬಿಡುಗಡೆಗೊಂಡ ಸಾಕ್ಷ್ಯಚಿತ್ರದ ಕುರಿತು ಯಕ್ಷಗಾನ ಅರ್ಥಧಾರಿ ಸಾಹಿತಿ ರಾಧಾಕೃಷ್ಣ ಕಲ್ಚಾರ್ ಮಾತನಾಡುವರು.ಕೃತಿಯ ಕುರಿತು ಯಕ್ಷಗಾನ ಸಂಘಟಕ ಅಮ್ಮುಂಜೆ ಜನಾರ್ದನರು ಮಾತನಾಡುವರು.ಸಮಾರೋಪ ಸಮಾರಂಭದಲ್ಲಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ,ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಜಿ.ಎಸ್ ಶಿವರುದ್ರಪ್ಪ,ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಕದ್ರಿ ನವನೀತ ಶೆಟ್ಟಿ ಭಾಗವಹಿಸುವರು.ಸಿರಿಚಂದನ ಕನ್ನಡ ಯುವಬಳಗದ ಸದಸ್ಯ ಸುಜಾತ ಸಿ.ಯಚ್ ಕಾರ್ಯಕ್ರಮಕ್ಕೆ ಶುಭಕೋರುವರು.





