ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣದ ವಠಾರದಲ್ಲಿ ನೆರಳು ಮರಗಳ ಸಂರಕ್ಷಿಸುವ ನಿಟ್ಟಿನಲ್ಲಿ ನಡೆಸಲಾದ 'ಆಪರೇಶನ್ ಪಯಸ್ವಿನಿ' ಬುಧವಾರ ಯಶಸ್ವಿಯಾಗಿ ನಡೆಯಿತು. ಕೇರಳದ ಖ್ಯಾತ ಕವಯಿತ್ರಿ ಎಂ. ಸುಗದ ಕುಮಾರಿ ನೆಟ್ಟಿರುವ 'ಪಯಸ್ವಿನಿ'ಹೆಸರಿನ ಈ ಮಾವಿನ ಮರವನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಸಂದರ್ಭ ಸ್ಥಳಾಂತರಿಸಿ, ಅಡ್ಕತ್ತಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನೆಡಲಾಯಿತು. ಸುಮಾರು ಎಂಟು ತಾಸುಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ಕು ಜೆಸಿಬಿ, ಕ್ರೇನ್, ಐವತ್ತಕ್ಕೂ ಹೆಚ್ಚು ಕಾರ್ಮಿಕರನ್ನು ಆಪರೇಶನ್ ಪಯಸ್ವಿನಿಗೆ ಬಳಸಿಕೊಳ್ಳಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಗುತ್ತಿಗೆದಾರರಾದ ಉರಾಳುಂಗಲ್ ಕಾರ್ಮಿಕ ಗುತ್ತಿಗೆ ಸಹಕಾರ ಸಂಘ ಈ ಮರವನ್ನು ಸಂರಕ್ಷಿಸಿ ಅಡ್ಕತ್ತಬೈಲಿನ ಶಾಲಾ ಮೈದಾನಕ್ಕೆ ಸ್ಥಳಾಂತರಿಸುವ ಕೆಲಸ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ 66 ರಿಂದ ಆರು ಪಥಗಳಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಚತುಷ್ಪಥ ಕಾಮಗಾರಿ ಆರಂಭಗೊಂಡು ಹಲವು ತಿಂಗಳು ಕಳೆದಿದ್ದರೂ, ಹಲವು ರೆಂಬೆಗಳಿಂದ ಬೆಳೆದು ನಿಂತ 16ವರ್ಷ ಪ್ರಾಯದ ಈ ಮರವನ್ನು ಹೂಬಿಡುವ ಋತುವಿನ ಅಂತ್ಯದವರೆಗೂ ಸಂರಕ್ಷಿಸಿ, ಸ್ಥಳಾಂತರ ಕಾರ್ಯವನ್ನು ತಡೆಹಿಡಿಯಲಾಗಿತ್ತು. ಬುಧವಾರ ನಡೆದ ಮರ ತೆರವು ಕಾರ್ಯಾಚರಣೆಯಲ್ಲಿ ದೊಡ್ಡ ಕೊಂಬೆಗಳನ್ನು ಕತ್ತರಿಸಿ, ಶಿಲೀಂಧ್ರ ಸಓಂಕು ತಡೆಗಟ್ಟಲು ವಿಶೇಷ ಮಿಶ್ರಣವನ್ನು ಲೇಪಿಸಲಾಗಿತ್ತು. ನಂತರ ಮರವನ್ನು ಬೃಹತ್ ಜೆಸಿಬಿ ಸಹಾಯದಿಂದ ಕ್ರೇನ್ ಮೂಲಕ ಮಣ್ಣಿನಡಿಯಿಂದ ಮೇಲಕ್ಕೆತ್ತಲಾಗಿದೆ.
ಅಡ್ಕತ್ತಬೈಲ್ ಶಾಲಾ ವಠಾರದ್ಲಲಿ ನಿರ್ಮಿಸಿದ ಸುಮಾರು ಹತ್ತು ಅಡಿ ಆಳದ ಹೊಂಡದಲ್ಲಿ ಕ್ರೇನ್ ಸಹಾಯದಿಂದ ಮರವನ್ನು ನೆಟ್ಟು, ಮೇಲ್ಮಣ್ಣು, ಕಾಂಪೆÇೀಸ್ಟ್ ಮತ್ತು ತೆಂಗಿನಸಿಪ್ಪೆ ಮಿಶ್ರಣದಿಂದ ಪಿಟ್ನ ಉಳಿದ ಭಾಗವನ್ನು ತುಂಬಿಸಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆ ಉತ್ತರ ಪ್ರಾಂತ ಸಂರಕ್ಷಣಾಧಿಕಾರಿ ಆರ್.ಕೀರ್ತಿ ಅವರ ನೇತೃತ್ವದಲ್ಲಿ ಮರ ಸ್ಥಳಾಂತರ ಮತ್ತು ನೆಡುವ ಪ್ರಕ್ರಿಯೆ ನಡೆದಿದೆ. 2006ರಲ್ಲಿ ನಗರದ ಹೃದಯ ಭಾಗದಲ್ಲಿ ಪಯಸ್ವಿನಿ ಹೆಸರಿನ ಮಾವಿನ ಮರ ನೆಡಲು ನೇತೃತ್ವ ವಹಿಸಿದ್ದ ಕಾಸರಗೋಡು ಪೀಪಲ್ಸ್ ಫೆÇೀರಂನ ಪ್ರತಿನಿಧಿಗಳು, ಮಾತೃಭೂಮಿ ಸೀಡ್ ಕ್ಲಬ್, ಎನ್ಸಿಸಿ-ಎನ್ಎಸ್ಎಸ್ ವಿದ್ಯಾರ್ಥಿಗಳು, ಅರಣ್ಯ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭಾಗವಹಿಸಿದ್ದರು.
ಹೂ ಹಾಕಿ ಸ್ವಾಗತ:
ಬೃಹತ್ ಜೆಸಿಬಿ ಮೂಲಕ ಹೊಸ ಬಸ್ ನಿಲ್ದಾಣದಿಂದ ಅಡ್ಕತ್ತಬೈಲ್ ಶಾಲೆಗೆ ಮರವನ್ನು ತರುತ್ತಿದ್ದಂತೆ ಶಾಲೆಯ ನೂರಾರು ವಿದ್ಯಾರ್ಥಿಗಳು ಪುಷ್ಪವೃಷ್ಟಿಗೈದು ಮರಕ್ಕೆ ಸ್ವಾಗತ ನೀಡಿದರು. ಕವಯಿತ್ರಿ ಸುಗದಕುಮಾರಿ ಅವರ ಭಾವಚಿತ್ರ ಹೊಂದಿದ ಫ್ಲೆಕ್ಸ್ ರಾರಾಜಿಸುತ್ತಿತ್ತು. ಸುಗತಕುಮಾರಿ ಅವರ ನಿಧನದ ನಂತರ ಶ್ರೇಷ್ಠ ಕವಿಯ ಸಂಸ್ಮರಣಾ ದಿನವನ್ನು ಆಚರಿಸಲು ವಿದ್ಯಾರ್ಥಿಗಳು ಹೊಸ ಬಸ್ ನಿಲ್ದಾಣದ ಇದೇ ಮಾವಿನ ಮರದ ಬುಡಕ್ಕೆ ಆಗಮಿಸುತ್ತಿದ್ದರು. ಶಾಲಾ ವಠಾರದಲ್ಲಿ ಮರ ನೆಡುವ ಕಾರ್ಯಕ್ರಮದಲ್ಲಿ ಶಾಸಕ ಎನ್.ಎ ನೆಲ್ಲಿಕುನ್ನು, ಅರಣ್ಯ ಇಲಾಖೆ ಉತ್ತರ ಪ್ರಾಂತ ಸಂರಕ್ಷಣಾಧಿಕಾರಿ ಆರ್.ಕೀರ್ತಿ, ಡೆಪ್ಯುಟಿ ಕನ್ಸರ್ವೇಟರ್ ಪಿ. ಧನೇಶ್ ಕುಮಾರ್, ಸೋಶಿಯಲ್ ಫಾರೆಸ್ಟ್ ರೇಂಜ್ ಅಧಿಕಾರಿ ಕೆ.ವಿ ಅರುಣೇಶ್, ರೇಂಜ್ ಅಧಿಕಾರಿ ಸೋಲಮನ್ ಜಾರ್ಜ್, ಅಧಿಕಾರಿಗಳಾದ ಪಿ. ಪ್ರಭಾಕರನ್, ಎನ್.ವಿ ಸತ್ಯನ್, ಪೀಪಲ್ ಫಾರಂ ಅಧ್ಯಕ್ಷ ಪ್ರೊ. ಗೋಪಿನಾಥನ್, ಎಂ.ಕೆ ರಾಧಾಕೃಷ್ಣನ್, ಅಡ್ಕತ್ತಬೈಲ್ ಶಾಲಾ ಮುಖ್ಯ ಶಿಕ್ಷಕಿ ಕೆ. ಯಶೋಧ, ಪಿಟಿಎ ಅಧ್ಯಕ್ಷ ಹರೀಶ್, ಶಿಕ್ಷಕರು, ಉರಾಳುಂಗಲ್ ಕಾರ್ಮಿಕ ಗುತ್ತಿಗೆ ಸಹಕಾರ ಸಂಘದ ಅಧಿಕಾರಿಗಳು ಉಪಸ್ಥಿತರಿದ್ದರು.