ಕಾಸರಗೋಡು: ಕನ್ನಡ ಅಧ್ಯಾಪಕರ ಸಂಘ ಸೇರಿದಂತೆ ಕನ್ನಡಪರಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಕೊನೆಗೂ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಹುದ್ದೆಗೆ ಮತ್ತೆ ಕನ್ನಡಿಗ ಅಧಿಕಾರಿಯ ನೇಮಕವಾಗಿದೆ. ಕಾಸರಗೋಡು ಶೈಕ್ಷಣಿಕ ಜಿಲ್ಲಾ ಶಿಕ್ಷಣಾಧಿಕಾರಿಯನ್ನಾಗಿ, ಈ ಹಿಂದೆ ಇಲ್ಲಿ ಅಧಿಕಾರದಲ್ಲಿದ್ದ ನಂದಿಕೇಶನ್ ಎನ್ ಅವರನ್ನು ಮತ್ತೆ ನೇಮಿಸಲಾಗಿದೆ.
ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ಹುದ್ದೆಗೆ ಮಲಯಾಳಿ ಸುರೇಶ್ ಕುಮಾರ್ ಎಂ ಅವರನ್ನು ನೇಮಿಸಿರುವುದನ್ನು ವಿರೋಧಿಸಿ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ತನ್ನ ವ್ಯಾಪಕ ವಿರೋಧ ವ್ಯಕ್ತಪಡಿಸಿತ್ತು. ಕಾಸರಗೋಡು ಶೈಕ್ಷಣಿಕ ಜಿಲ್ಲಾ ಶಿಕ್ಷಣಾಧಿಕಾರಿ ಹುದ್ದೆ ಸಂವಿಧಾನಾತ್ಮಕವಾಗಿ ಕನ್ನಡಿಗರಿಗೇ ನೀಡಬೇಕಾಗಿದ್ದರೂ, ಇಲ್ಲಿ ಮಲಯಾಳಿ ಅಧಿಕಾರಿಯನ್ನು ನೇಮಿಸಿರುವುದು ವಿರೋಧಕ್ಕೆ ಕಾರಣವಾಗಿತ್ತು. ಇಲ್ಲಿ ಶಿಕ್ಷಣಾಧಿಕರಿಯಾಗಿದ್ದ ನಂದಿಕೇಶನ್ ಕಾಞಂಗಾಡಿಗೆ ವರ್ಗಾವಣೆಗೊಳ್ಳುತ್ತಿದ್ದಂತೆ ಕನ್ನಡಿಗ ಅಧಿಕಾರಿ ಬದಲು ಇಲ್ಲಿಗೆ ಮಲಯಾಳಿ ಅಧಿಕಾರಿಯನ್ನು ನೇಮಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಪ್ರಸಕ್ತ ಪ್ರತಿಭಟನೆ ಹೆಚ್ಚುತ್ತಿದ್ದಂತೆ ಸುರೇಶ್ ಕುಮಾರ್ ಅವರನ್ನು ಮತ್ತೆ ಕಾಞಂಗಾಡು ಶೈಕ್ಷಣಿಕ ಜಿಲ್ಲಾಧಿಕರಿಯನ್ನಾಗಿ ನೇಮಿಸಿ, ಅಲ್ಲಿಂದ ನಂದಿಕೇಶನ್ ಅವರನ್ನು ಮತ್ತೆ ಕಾಸರಗೋಡಿಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.
ಶಮನಗೊಂಡ ವಿವಾದ: ಕಾಸರಗೋಡಿಗೆ ಮತ್ತೆ ಕನ್ನಡಿಗ ಶಿಕ್ಷಣಾಧಿಕಾರಿ ನೇಮಕ
0
August 29, 2022