ಬದಿಯಡ್ಕ: ಬದಿಯಡ್ಕದ ದಂತವೈದ್ಯ ಡಾ.ಕೃಷ್ಣಮೂರ್ತಿ ಅವರು ನಿಗೂಢವಾಗಿ ಮೃತಪಟ್ಟ ಪ್ರಕರಣದಲ್ಲಿ ಐದು ಮಂದಿಯನ್ನು ಬದಿಯಡ್ಕ ಪೋಲೀಸರು ಕೊನೆಗೂ ಬಂಧಿಸಿದ್ದಾರೆ.
ಮುಸ್ಲಿಂಲೀಗ್ ಕುಂಬ್ಡಾಜೆ ಪಂಚಾಯತಿ ಕಾರ್ಯದರ್ಶಿ ಆಲಿ ತುಪ್ಪಕಲ್ಲು, ಮುಸ್ಲಿಂಲೀಗ್ ಬದಿಯಡ್ಕ ಪಂಚಾಯತಿ ಪದಾಧಿಕಾರಿ ಮುಹಮ್ಮದ್ ಹನೀಫ ಯಾನೆ ಅನ್ವರ್ ಓಝೋನ್, ಕುಂಬ್ಡಾಜೆ ನಿವಾಸಿ ಅಶ್ರಫ್, ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ಮುನಿಯೂರು ನಿವಾಸಿ ಉಮರುಲ್ ಫಾರೂಕ್ ಬಂಧಿತರು.
ಇವರಲ್ಲಿ ಆಲಿ ಹಾಗೂ ಅನ್ವರ್ ಓಝೋನ್ ನೇತೃತ್ವದಲ್ಲಿ ಡಾ.ಕೃಷ್ಣಮೂರ್ತಿ ಅವರನ್ನು ಕ್ಲಿನಿಕ್ ನಲ್ಲಿ ಮಂಗಳವಾರ ಕೊಲೆ ಬೆದರಿಕೆ ಒಡ್ಡಲಾಗಿತ್ತು. ಅಲ್ಲದೆ 10 ಲಕ್ಷ ರೂ.ಗಳ ಹಣದ ಬೇಡಿಕೆ ಒಡ್ಡಲಾಗಿತ್ತೆಂದು ತಿಳಿದುಬಂದಿದೆ. ಇದಕ್ಕೂ ಮೊದಲು ವೈದ್ಯರಿಂದ ಕ್ಷಮೆಯಾಚಿಸುವ ನಾಟಕವಾಡಿ ಮಾನಸಿಕವಾಗಿ ಕುಗ್ಗಿಸಲಾಗಿತ್ತು. ಸರಳ, ಸ್ವಾಭಿಮಾನಿಗಳಾಗಿದ್ದ ಡಾ.ಕೃಷ್ಣಮೂರ್ತಿ ಇದರಿಂದ ಪೂರ್ಣಪ್ರಮಾಣದಲ್ಲಿ ಕ್ಷೋಭೆಗೊಳಗಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಂಗಳವಾರದ ಬೆದರಿಯ ಘಟನೆಯ ಬಳಿಕ ಡಾ.ಕೃಷ್ಣಮೂರ್ತಿ ನಿಗೂಢರಾಗಿ ನಾಪತ್ತೆಯಾಗಿದ್ದರು. ಈ ಮಧ್ಯೆ ಅವರ ಮೃತದೇಹ ಪೂರ್ಣ ಪ್ರಮಾಣದಲ್ಲಿ ಘಾಸಿಗೊಂಡ ಸ್ಥಿತಿಯಲ್ಲಿ ಕುಂದಾಪುರದ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕುಂದಾಪುರ ಪೋಲೀಸರು ಪಂಚೆನಾಮೆ ನಡೆಸಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮಹಜರು, ವ್ಯಕ್ತಪತ್ತೆ ನಡೆಸಿದ್ದರು. ಇಂದು ಬೆಳಿಗ್ಗೆ ಮೃತದೇಹವನ್ನು ಊರಿಗೆ ತಂದು ಅಂತ್ಯಸಂಸ್ಕಾರ ನಡೆಸಲಾಯಿತು.
ಘಟನೆಯನ್ನು ಖಂಡಿಸಿ ವಿ.ಹಿಂ.ಪ.ನೇತೃತ್ವದಲ್ಲಿ ಇಂದು ಬೆಳಿಗ್ಗೆ ಬದಿಯಡ್ಕ ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆದಿದೆ. ವಿಹಿಂಪ ಮುಖಂಡ ಶರಣ್ ಪಂಪ್ ವೆಲ್ ಸಹಿತ ಪ್ರಮುಖರು ನೇತೃತ್ವ ವಹಿಸಿದ್ದರು.
ದಂತವೈದ್ಯ ಡಾ.ಕೃಷ್ಣಮೂರ್ತಿಗಳ ಸಾವು ಪ್ರಕರಣ: ಐವರ ಬಂಧನ
0
November 11, 2022
Tags