ಮಧೂರು: ನಾಡಿಗೆ ಸÀರ್ಕಾರಕ್ಕಿಂತ ಅಧಿಕ ಸೇವೆಯನ್ನು ವಿವಿಧ ಯೋಜನೆಗಳ ಸ್ವಯಂ ಸೇವಕರು ನೀಡಬಲ್ಲರು ಎಂದು ಶಾಸಕ ಎನ್.ಎ.ನೆಲ್ಲಿಕುನ್ನು ಅಭಿಪ್ರಾಯಪಟ್ಟರು.
ಉಳಿಯತ್ತಡ್ಕ ಗಣೇಶ ನಗರ ಶ್ರೀ ಶಕ್ತಿ ಸಭಾಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ "ಶೌರ್ಯ" ವಿಪತ್ತು ಕಾರ್ಯಕ್ರಮದ ಸ್ಥಳೀಯ ಸಮಿತಿ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಬೆಳ್ತಂಗಡಿಯ ಜನಜಾಗೃತಿ ಪ್ರಾದೇಶಿಕ ವಿಭಾಗ, ಕಾಸರಗೋಡು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.
ಬಡಜನಸೇವೆ ನಡೆಸದವನ ಸೇವೆಯನ್ನು ಭಗವಂತನೂ ಸ್ವೀಕರಿಸಲಾರ. ಕೇರಳದಲ್ಲಿ ನೆರೆಹಾವಳಿಯಾದಾಗ ಮೀನುಗಾರರು ಸೈನಿಕರಂತೆ ಸಂರಕ್ಷಣೆ ನಡೆಸಿದರು. ಕಾಸರಗೋಡಿಗೆ ನೆರೆಹಾವಳಿ ಇಲ್ಲದಿದ್ದಾಗಲೂ ಇತರ ಜಿಲ್ಲೆಗಳಿಗೆ ಅಹಾಯ ಹಸ್ತನೀಡುವಲ್ಲಿ ಹಿಂದೆ ಬೀಳಲಿಲ್ಲ ಎಂಬುದು ಮಾದರಿ ಕ್ರಮವಾಗಿದೆ. ರೋಗಗಳು, ವಿಪತ್ತು ಮುಂಗಡ ತಿಳಿಸಿ ಬರುವುದಿಲ್ಲ. ಕಾಲದ ವೈಪರೀತ್ಯದಿಂದ ಯಾವಾಗ ಯಾವ ಕಾಲ ಎಂಬುದನ್ನು ಮರೆಸಿದೆ. ಮಳೆ, ಚಳಿ, ಬೇಸಿಗೆಗಳು ನಿಗದಿತವಾಗಿಲ್ಲ. ನಮ್ಮ ನಾಡು ಚಿರಾಪುಂಜಿಯನ್ನೂ ಮೀರಿಸಿದೆ ಎಂದರು.
ಜನಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಗೋಪಾಲಶೆಟ್ಟಿ ಅರಿಬೈಲು ಅವರು ಮಾತನಾಡಿ ಶೌರ್ಯ ಯೋಜನೆ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕಾಯಕ ನಡೆಯುತ್ತಿದೆ. ನಮ್ಮ ದುಡಿಮೆ ಇತರರಿಗೆ ಪ್ರೇರಣೆಯಾಗಬೇಕು ಎಂದರು.
ಜನಜಾಗೃತಿ ವೇದಿಕೆ ಜಿಲ್ಲಾ ಸಮಿತಿ ಅಧ್ಯಕ್ಷ ಆಶ್ವಥ್ ಪೂಜಾರಿ ಲಾಲ್ ಭಾಗ್ ಅಧ್ಯಕ್ಷತೆ ವಹಿಸಿದ್ದರು. ಜಯವಂತ್ ಪಟಿಗಾರ್, ಶುಭಾ ಕುದ್ರೆಪ್ಪಾಡಿ ಇದ್ದರು. ಅಖಿಲ ಕರ್ನಾಟಕ ಜನಜಾಗೃತಿ ವಿಭಾಗ ಕಾರ್ಯದರ್ಶಿ ವಿವೇಕ್ ವಿ.ಪಾಸ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಯೋಜನಾಧಿಕಾರಿ ಮುಖೇಶ್ ಸ್ವಾಗತಿಸಿದರು. ಕಾಸರಗೋಡು ವಲಯ ಮೇಲ್ವಿಚಾರಕಿ ಪುಷ್ಪಲತಾ ವಂದಿಸಿದರು.
ಕಾಸರಗೋಡು ಅಗ್ನಿಶಾಮಕ ಇಲಾಖೆಯ ಠಾಣಾ ಅಧಿಕಾರಿ ಪ್ರಕಾಶ್ ಕುಮಾರ್ ಮತ್ತು ಸಿಬ್ಬಂದಿ ಸಜಿನ್ ತರಗತಿ ನಡೆಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ವರ್ಚುವಲ್ ವೇದಿಕೆ ಮೂಲಕ ಆಶಯ ಭಾಷಣ ನಡೆಸಿದರು. ನೂರಾರು ಮಂದಿ ಸಮವಸ್ತ್ರಧಾರಿ ಸ್ವಯಂಸೇವಕರು ಇದ್ದರು.