ಉಪ್ಪಳ: ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಗಳನ್ನು ಖಂಡಿಸಿ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಬುಡಮೇಲುಗೊಳಿಸುವ ವ್ಯವಸ್ಥಿತ ಷಡ್ಯಂತ್ರದ ವಿರುದ್ಧ ಭಾರತೀಯ ಜನತಾ ಪಕ್ಷ ಕುಂಬಳೆ ಮಂಡಲ ಸಮಿತಿಯ ಜ.26 ರಿಂದ ಪೆರ್ಲದಲ್ಲಿ ಪ್ರಾರಂಭಿಸಿದ ಪಾದಯಾತ್ರೆ ಶನಿವಾರ ಉಪ್ಪಳ ಪೇಟೆಯಲ್ಲಿ ಸಮಾರೋಪಗೂಂಡಿತು.
ಬಿಜೆಪಿ ಕುಂಬಳೆ ಮಂಡಲ ಉಪಾಧ್ಯಕ್ಷ ರಮೇಶ್ ಭಟ್ ಕುಂಬಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಯುವಮೋರ್ಚಾ ರಾಜ್ಯ ಅಧ್ಯಕ್ಷ ಸಿ .ಆರ್ ಪ್ರಪುಲ್ಲಕೃಷ್ಣನ್ ಉದ್ಘಾಟಿಸಿ ಮಾತನಾಡಿದರು. ಜಾಥಾ ನಾಯಕ ಸುನಿಲ್ ಅನಂತಪುರ ಮಾತನಾಡಿ, ರಾಜ್ಯ ಸರ್ಕಾರ ಹೆಸರು ಬದಲಾವಣೆಯಿಸಿ ಕೇಂದ್ರ ಸರ್ಕಾರದ ಯೋಜನೆಗಳನ್ನು ತನ್ನದಾಗಿಸಿಕೊಳ್ಳುತ್ತಿರುವುದನ್ನು ಜನರಿಗೆ ಮನವರಿಕೆ ಮಾಡಲು ಯಾತ್ರೆ ಸಹಕಾರಿಯಾಯಿತು ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ, ಕಾರ್ಯದರ್ಶಿ ಮನುಲಾಲ್ ಮೇಲೊತ್, ಯುವಮೊರ್ಚ ರಾಜ್ಯ ಮಹಿಳಾ ಸೆಲ್ ಸಂಯೋಜಕಿ ಅಂಜು ಜೊಸ್ಟಿ, ರಾಜ್ಯ ಸಮಿತಿ ಸದಸ್ಯ ವಕೀಲ ಬಾಲಕೃಷ್ಣ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತಕುಮಾರ್ ಮಯ್ಯ, ಅನಿಲ್ ಮಣಿಯಂಪಾರೆ ಮತ್ತು ಪಕ್ಷದ ಹಲವಾರು ನೇತಾರರು, ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸಿದರು. ಮಂಡಲ ಕಾರ್ಯದರ್ಶಿ ಧನರಾಜ್ ಪ್ರತಾಪ್ ನಗರ ವಂದಿಸಿದರು.