ಕುಂಬಳೆ: ರಾಜ್ಯ ಶಾಲಾ ಕಲಾ ಉತ್ಸವದಲ್ಲಿ ಯಕ್ಷ ಗಾನಕ್ಕೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೇಶೀಯ ಅಧ್ಯಾಪಕ ಪರಿಷತ್ತು (ಎನ್ ಟಿಯು) ಆಗ್ರಹಿಸಿದೆ.
ರಾಜ್ಯ ಶಾಲಾ ಕಲಾ ಉತ್ಸವದ ನಿಮಿತ್ತ ಕೋಝಿಕ್ಕೋಡ್ ಅಚ್ಯುತನ್ ಬಾಲಕಿಯರ ಶಾಲೆ ‘ಮುಪ್ಪಿಲಶ್ಶೇರಿ’ ವೇದಿಕೆಯಲ್ಲಿ ಯಕ್ಷಗಾನಕ್ಕೆ ಅವಮಾನ ಮಾಡಲಾಗಿದೆ. ಪ್ರೌಢಶಾಲಾ ವಿಭಾಗದ ಸ್ಪರ್ಧೆಯ ವೇಳೆ ‘ಚೌಕಿ’ಪೂಜೆ ಸಲ್ಲಿಸುತ್ತಿದ್ದಾಗ ಸಂಘಟಕರು ದೀಪವನ್ನು ಆರಿಸಿ ಪೂಜೆಯನ್ನು ನಿಲ್ಲಿಸಿದರು. 'ಚೌಕಿ' ಪೂಜೆಯು ಧಾರ್ಮಿಕ ಕಲೆಯಾದ ಯಕ್ಷಗಾನದ ಪ್ರದರ್ಶನದ ಮೊದಲು ನಡೆಸುವ ಗಣೇಶನ ಪೂಜೆಯಾಗಿದೆ. ಕಲೋತ್ಸವದ ವೇದಿಕೆಗಳಲ್ಲಿ ಯಕ್ಷಗಾನ ಸೇರ್ಪಡೆಯಾದ ಕಾಲದಿಂದಲೂ ನಡೆದುಕೊಂಡು ಬಂದ ಆಚರಣೆಗೆ ಅಡ್ಡಿಪಡಿಸುವ ಮೂಲಕ ಸಂಘಟಕರು ಯಕ್ಷಗಾನ ಕಲೆಗೆ ಹಾಗೂ ಕಲಾವಿದರಿಗೆ ಅವಮಾನ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎನ್.ಟಿ.ಯು ಆಗ್ರಹಿಸಿದೆ.
ಎನ್.ಟಿ.ಯು. ಕೋಝಿಕ್ಕೋಡ್ ಕಾರ್ಯಾಲಯದಲ್ಲಿ ಈ ಬಗ್ಗೆ ನಡೆದ ಸಭೆಯನ್ನು ರಾಜ್ಯಾಧ್ಯಕ್ಷ ಪಿ.ಎಸ್.ಗೋಪಕುಮಾರ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಕೆ.ಸ್ಮಿತಾ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಟಿ.ಅನೂಪ್ ಕುಮಾರ್, ಉಪಾಧ್ಯಕ್ಷ ಆರ್.ಜಿಗಿ ಕಾರ್ಯದರ್ಶಿ ಕೆ.ಪ್ರಭಾಕರನ್ ನಾಯರ್, ಪಿ.ಪ್ರಮೋದ್ ಕುಮಾರ್, ಸಿ.ಬೈಜು ಮತ್ತಿತರರು ಮಾತನಾಡಿದರು.
ಕಲೋತ್ಸವ ವೇದಿಕೆಯಲ್ಲಿ ಯಕ್ಷಗಾನ ಕಲೆಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು: ಎನ್.ಟಿ.ಯು
0
January 08, 2023
Tags