ಕಾಸರಗೋಡು: ಕ್ಯಾಂಪ್ಕೋ ಮಂಗಳೂರು , ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾಣ(ಎಆರ್ಡಿಎಫ್), ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಏಂಡ್ ಟಕ್ನಾಲಜಿಯ ಸಂಯುಕ್ತ ಆಶ್ರಯದಲ್ಲಿ ಐದನೇ ವರ್ಷದ ಬೃಹತ್ ಕೃಷಿಯಂತ್ರ ಮೇಳ-2023 ಹಾಗೂ ಮಿತ ವ್ಯಯದಲ್ಲಿ ಮನೆ ನಿರ್ಮಾಣದ ಬಗ್ಗೆ ಮಾಹಿತಿ'ಕನಸಿನ ಮನೆ'ಯೋಜನೆ ಫೆ. 10ರಿಂದ 12ರ ವರೆಗೆ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಏಂಡ್ ಟೆಕ್ನಾಲಜಿ ವಠಾರದಲ್ಲಿ ಜರುಗಲಿದೆ. ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಸಮಾರಂಭದ ಅಂಗವಾಗಿ ಮೇಳ ಆಯೋಜಿಸಲಾಗಿದೆ. 11ರಂದು ಕೇಂದ್ರ ಸಚಿವ ಅಮಿತ್ ಷಾ ಸುವರ್ಣಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡುವರು ಎಂದು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ನಾಲ್ಕು ಮೇಳಗಳಲ್ಲಿ ಅಭೂತಪೂರ್ವ ಯಶಸ್ಸು ಪಡೆದಿರುವ ಕೃಷಿಯಂತ್ರ ಮೇಳದಲ್ಲಿ ಈ ಬಾರಿ 3ಲಕ್ಷಕ್ಕೂ ಅಧಿಕ ಸಂದರ್ಶಕರು ಭಾಗವಹಿಸುವ ನಿರೀಕ್ಷೆಯಿದೆ. ಡ್ರೋಣ್ ತಂತ್ರಜ್ಞಾನ ಬಳಸಿ ಅಡಕೆಗೆ ಔಷಧ ಸಿಂಪಡಣೆ ಪ್ರಾತ್ಯಕ್ಷಿಕೆ, ಅಡಕೆ ಕೊಯ್ಲು-ಔಷಧ ಸಿಂಪಡಣೆಗೆ ಯೋಗ್ಯ ಫೈಬರ್ ದೋಟಿ ಬಳಕೆ ಪ್ರಾತ್ಯಕ್ಷಿಕೆ, ಮಾರಾಟ, ಜಲಕೃಷಿ ವಿಧಾನದ ಸಮಗ್ರ ಪರಿಚಯ, ಕೃಷಿಯಲ್ಲಿ ಸಾವಯವ ಗೊಬ್ಬರ ಬಳಕೆ, ಕೃಷಿಯಲ್ಲಿ ಯಂತ್ರೋಪಕರಣ ಬಳಕೆ ಬಗ್ಗೆ ಮಾಹಿತಿ, ನೂತನವಾಗಿ ಆವಿಷ್ಕರಿಸಲಾದ ಹೈನುಗಾರಿಕೆ ತಂತ್ರಜ್ಞಾನ, ಪರಿಕರಗಳ ಪ್ರದರ್ಶನ, ಸಾವಯವ ಕೃಷಿ ಉತ್ಪನ್ನಗಳ ಮಳಿಗೆಗಳು ಇರಲಿದೆ. 350ರಷ್ಟು ಸ್ಟಾಲ್ಗಳು ಮೇಳದಲ್ಲಿ ಕಾರ್ಯಾಚರಿಸಲಿದೆ.
10ರಂದು ಕೇಂದ್ರ ಸಹಾಯಕ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಕೃಷಿಮೇಳ ಉದ್ಘಾಟಿಸುವರು. 11ರಂದು ಮಧ್ಯಾಹ್ನ 2.30ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸುವರು. ಇದೇ ಸಂದರ್ಭ ಪುತ್ತೂರು ಶ್ರೀ ಮಹಮ್ಮಾಯಿ ದೇವಸ್ಥಾನ ಸನಿಹ ಒಂದು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲುದ್ದೇಶಿಸಿರುವ ಅಗ್ರಿ ಮಾಲ್ಗೆ ಶಿಲಾನ್ಯಾಸ ನಡೆಸುವರು. ಜತೆಗೆ ಪುತ್ತೂರು ಚಾಕೋಲೇಟ್ ಕಾರ್ಖಾನೆ ವಠಾರದಲ್ಲಿ ತೆಂಗಿನಕಾಯಿ ಘಟಕ ಮತ್ತು ಭದ್ರಾವತಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲ್ಪಟ್ಟ ಬಹು ಉದ್ದೇಶಿತ ಗೋದಾಮನ್ನು ಆನ್ಲೈನ್ ಮೂಲಕ ಉದ್ಘಾಟಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ಜಯರಾಮ ಸರಳಾಯ, ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ರಾಧಾಕೃಷ್ಣನ್, ರವಿಕೃಷ್ಣ ಕಲ್ಲಾಜೆ, ಸತೀಶ್ ಕೋಂಗೋಟ್, ಅಜಿತ್ ಕೆ ಉಪಸ್ಥಿತರಿದ್ದರು.
ಕ್ಯಾಂಪ್ಕೋ ಸುವರ್ಣಮಹೋತ್ಸವ ಸಮಾರಂಭ-11ರಂದು ಕೇಂದ್ರ ಸಚಿವ ಅಮಿತ್ಷಾ ಉದ್ಘಾಟನೆ
0
ಫೆಬ್ರವರಿ 04, 2023





