ಅಯೋಧ್ಯೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಏಪ್ರಿಲ್ 23 ರಂದು 155 ದೇಶಗಳ ನದಿ ನೀರಿನಿಂದ ರಾಮಲಲ್ಲಾ ದೇವರ 'ಜಲಾಭಿಷೇಕ' ನಡೆಸಲಿದ್ದಾರೆ.
ದೆಹಲಿ ಮೂಲದ ರಾಮನ ಭಕ್ತ ವಿಜಯ್ ಜಾಲಿ ನೇತೃತ್ವದ ತಂಡವು 155 ದೇಶಗಳ ನದಿಗಳ ನೀರನ್ನು ಸಂಗ್ರಹಿಸಿ, ಆದಿತ್ಯನಾಥ್ ಅವರಿಗೆ ಹಸ್ತಾಂತರಿಸಲಿದೆ ಎಂದು ಶ್ರೀ ರಾಮ ಜನ್ಮಭೂಮಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 2024ರ ಜನವರಿಯಲ್ಲಿ ಮಂದಿರದ ಗರ್ಭಗುಡಿಯನ್ನು ಜನರ ದರ್ಶನಕ್ಕೆ ತೆರೆಯಲು ನಿರ್ಧರಿಸಲಾಗಿದೆ ಎಂದು ರೈ ಹೇಳಿದ್ದಾರೆ.
ಮಣಿರಾಮ್ ದಾಸ್ ಚಾವ್ನಿ ಸಭಾಂಗಣದಲ್ಲಿ ಏಪ್ರಿಲ್ 23ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 'ಜಲ ಕಲಶದ' ಪೂಜೆಯನ್ನು ನೆರವೇರಿಸಲಿದ್ದಾರೆ.
ರಾವಿ ನದಿಯ ನೀರನ್ನು ಹಿಂದೂಗಳು ಪಾಕಿಸ್ತಾನದಿಂದ ದುಬೈಗೆ ಕಳುಹಿಸಿದ್ದರು. ಅಲ್ಲಿಂದ ದೆಹಲಿಗೆ ತರಲಾಗಿದೆ ಎಂದು ರೈ ಹೇಳಿದರು.