ತಿರುವನಂತಪುರಂ: ಎನ್ಸಿಇಆರ್ಟಿ 12ನೇ ತರಗತಿಯ ಪಠ್ಯಪುಸ್ತಕಗಳಿಂದ ಕೆಲವು ಅಧ್ಯಾಯಗಳು ಮತ್ತು ಭಾಗಗಳನ್ನು ಕೈಬಿಟ್ಟ ಕೇಂದ್ರ ಸರ್ಕಾರದ ನಿರ್ಧಾರವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶುಕ್ರವಾರ ತೀವ್ರವಾಗಿ ಖಂಡಿಸಿದ್ದಾರೆ.
ಎನ್ಸಿಇಆರ್ಟಿ ಪಠ್ಯ ಪರಿಷ್ಕರಣೆ ಹಿಂದೆ ಶಾಲಾ ಪುಸ್ತಕಗಳನ್ನು "ಸಂಪೂರ್ಣ ಕೇಸರಿಕರಣ" ಮಾಡುವ ಉದ್ದೇಶ ಇದೆ ಎಂದು ಕೇರಳ ಸಿಎಂ ಆರೋಪಿಸಿದ್ದಾರೆ.
ಪಠ್ಯಪುಸ್ತಕಗಳಿಂದ ಅನಾನುಕೂಲವಾಗಿರುವ(ಕೆಲವರಿಗೆ) ಭಾಗಗಳನ್ನು ಕತ್ತರಿಸುವ ಮೂಲಕ ಐತಿಹಾಸಿಕ ಸತ್ಯಗಳನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಅವರು ಪಿಣರಾಯಿ ವಿಜಯನ್ ಅವರು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ರಾಜಕೀಯ ಉದ್ದೇಶದಿಂದ ಪಠ್ಯಪುಸ್ತಕಗಳಿಂದ ಕೆಲವು ಭಾಗಗಳು ಮತ್ತು ಅಧ್ಯಾಯಗಳನ್ನು ತೆಗೆದು ಹಾಕುವುದು ಇತಿಹಾಸ ತಿರುಚುವಿಕೆ ಮಾತ್ರವಲ್ಲದೆ ಖಂಡನೀಯ ಕ್ರಮ ಎಂದು ಹೇಳಿದ್ದಾರೆ.
ಇಂತಹ ಕ್ರಮಗಳ ಹಿಂದಿನ ಉದ್ದೇಶ ಪಠ್ಯಪುಸ್ತಕಗಳ ಸಂಪೂರ್ಣ ಕೇಸರಿಕರಣ ಮಾಡುವುದು ಎಂಬುದು ಸ್ಪಷ್ಟವಾಗಿದೆ ಎಂದು ಕೇರಳ ಸಿಎಂ ಹೇಳಿದ್ದಾರೆ.
12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದಲ್ಲಿದ್ದ 'ರಾಷ್ಟ್ರಪಿತ' ಮಹಾತ್ಮ ಗಾಂಧಿಯವರ ಹತ್ಯೆ ಮತ್ತು ನಂತರ ಆರ್ಎಸ್ಎಸ್ ಅನ್ನು ನಿಷೇಧದ ಕುರಿತ ಅಧ್ಯಾಗಳನ್ನು ಕೈಬಿಟ್ಟಿರುವುದು ಯಾರ ಹಿತಾಸಕ್ತಿಯನ್ನು ಪೂರೈಸುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಕೇರಳ ಸಿಎಂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.