ಬದಿಯಡ್ಕ: ಪರಸ್ಪರ ಭಾವನೆಯಿಂದ ಗೌರವಿಸಿ ಬದುಕುತ್ತಿರುವ ಸನಾತನ ಧರ್ಮ ನಮ್ಮದು. ನಮ್ಮ ಊರಿನ ದೇವಸ್ಥಾನಗಳು ಸುಭಿಕ್ಷವಾಗಿರಬೇಕು. ದೇವಸ್ಥಾನದ ನಿತ್ಯನೈಮಿತ್ತಿಕಗಳು ಸರಿಯಾಗಿ ನಡೆದಾಗ ನಾಡು ಸುಭಿಕ್ಷವಾಗುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಕಜೆಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ನಡೆದ ಬಾಲಾಲಯ ಪ್ರತಿಷ್ಠೆಯ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನವನ್ನು ನೀಡಿದರು.
ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಭಕ್ತಿಮಾರ್ಗದಲ್ಲಿ ದೇವರನ್ನು ಆರಾಧಿಸಲು ಯಾವುದೇ ನಿಬಂಧನೆಗಳಿಲ್ಲ. ಕರ್ಮಮಾರ್ಗದಲ್ಲಿ ಶಾಸ್ತ್ರಬೋಧಿಸಿದಂತೆ ನಾವು ಮುಂದುವರಿಯಬೇಕು. ಅದಕ್ಕೆ ಲೋಪಬಂದಲ್ಲಿ ಅದನ್ನು ಸರಿಪಡಿಸುವುದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ದೇವಸ್ಥಾನಗಳು, ದೈವಸ್ಥಾನಗಳು ಜೀರ್ಣೋದ್ಧಾರಗೊಳ್ಳುತ್ತಿದ್ದು, ನಮ್ಮ ಧರ್ಮದ ರಕ್ಷಣೆಗೆ ಸಮಾಜವು ಒಂದಾಗುತ್ತಿದೆ ಎಂಬುದು ಸಂತಸದ ವಿಚಾರ ಎಂದರು.
ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಕಿಶೋರ್ ಕುಮಾರ್ ಕುಣಿಕುಳ್ಳಾಯ, ಹಿರಿಯರಾದ ಉಪ್ಪಂಗಳ ವಾಸುದೇವ ಭಟ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಾಲಗೋಪಾಲ ಭಟ್, ಉದ್ಯಮಿ ನಿತ್ಯಾನಂದ ಶೆಣೈ, ಬದಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಹರಿನಾರಾಯಣ ಮಾಸ್ತರ್ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಧರ ಭಟ್ ಚೋಕೆಮೂಲೆ ಸ್ವಾಗತಿಸಿ, ಕಾರ್ಯದರ್ಶಿ ಸೂರ್ಯನಾರಾಯಣ ಭಟ್ ಮಾಳಿಗೆಮನೆ ವಂದಿಸಿದರು.
ಭಾವನೆಯಿಂದ ಬದುಕುವ ಧರ್ಮ ನಮ್ಮದು:ಎಡನೀರು ಶ್ರೀ: ಕಜೆಮಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಾಲಾಲಯ ಪ್ರತಿಷ್ಠೆ; ಸಭಾ ಕಾರ್ಯಕ್ರಮ
0
April 07, 2023