ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕಾಗಿ ಶುಕ್ರವಾರ ಧ್ವಜಾರೋಹಣ ನಡೆಯಿತು. ಈ ಮೂಲಕ ಐದು ದಿವಸಗಳ ಜಾತ್ರಾಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ದೇವಸ್ಥಾನದ ತಂತ್ರಿ ದೇರೆಬೈಲ್ ಶಿವಪ್ರಸಾದ ತಂತ್ರಿ ನೇತೃತ್ವ ವಹಿಸಿದ್ದರು. ಈ ಸಂದರ್ಭ ಮುಳ್ಳೇರಿಯ ಹವ್ಯಕ ವಲಯ ವತಿಯಿಂದ ರುದ್ರಪಾರಾಯಣ ನಡೆಯಿತು. ಐದು ದಿವಸಗಳ ಕಾಲ ನಡೆಯಲಿರುವ ಭಜನಾಕಾರ್ಯಕ್ರಮಕ್ಕೆ ಶಿವಪ್ರಸಾದ ತಂತ್ರಿ ಚಾಲನೆ ನೀಡಿದರು. ದೇವಸ್ಥಾನದ ಕಾರ್ಯಕ್ರಮ ನಿರ್ವಹಣಾಧಿಕಾರಿ ಕೃಷ್ಣವರ್ಮರಾಜೆ, ಬಿ.ಎನ್ ಸುಬ್ರಹ್ಮಣ್ಯ, ಅಪ್ಪಯ್ಯ ನಾಯ್ಕ್, ಊರ ಪ್ರಮುಖರು, ಪಾಲ್ಗೊಂಡಿದ್ದರು.
ಬೆಳಗ್ಗೆ ವೇದ ಪಾರಾಯಣ, ಧ್ವಜಾರೋಹಣ, ಸಹಸ್ರಕುಂಭಾಭಿಷೇಕ, ತುಲಾಭಾರ ಸೇವೆ, ತಾಯಂಬಕ, ದೀಪಾರಾಧನೆ ನಡೆಯಿತು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಶ್ರೀದೇವರ ಉತ್ಸವ ಬಲಿ ನಡೆಯುವುದು.
15ರಂದು ಬೆಳಗ್ಗೆ 5ಕ್ಕೆ ದೀಪೋತ್ಸವ, ವಿಷು ಕಣಿಯ ವಿಶೇಷ ಬಲಿ ಉತ್ಸವ, ರಾಜಾಂಗಣ ಪ್ರಸಾದ, ಪಂಚವಾದ್ಯ ನಡೆಯುವುದು. 16ರಂದು ನಡುದೀಪೋತ್ಸವ ಅಂಗವಾಗಿ ಬೆಳಗ್ಗೆ 5ಕ್ಕೆ ದೀಪೋತ್ಸವ, ಉತ್ಸವ ಬಲಿ, ಸಂಜೆ 7ಕ್ಕೆ ನಡುದೀಪೋತ್ಸವ, ಸೇವೆ ಸುತ್ತುಗಳು ನಡೆಯುವುದು. 17ರಂದು ಬೆಳಗ್ಗೆ 5ಕ್ಕೆ ಉತ್ಸವ ಬಲಿ, ಸಂಜೆ 6.30ಕ್ಕೆ ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀದೇವರ ಘೋಷಯಾತ್ರೆ, ಮೂಲಸ್ಥಾನ ಉಳಿಯತ್ತಡ್ಕದಲ್ಲಿ ಕಟ್ಟೆಪೂಜೆ, ರಾತ್ರಿ 10ಕ್ಕೆ ಮಧೂರು ಬೆಡಿಕಟ್ಟೆಯಲ್ಲಿ ಕಟ್ಟೆಪೂಜೆ, ಸಾಂಪ್ರದಾಯಕ ಸುಡುಮದ್ದು ಪ್ರದರ್ಶನ, ಶಯನ ನಡೆಯುವುದು. 18ರಂದು ಬೆಳಗ್ಗೆ ಕವಾಟೋದ್ಘಾನೆ, ತುಲಾಭಾರ ಸೇವೆ, ಸಂಜೆ 6ಕ್ಕೆ ತಾಯಂಬಕ, ದೀಪಾರಾಧನೆ, 7ಕ್ಕೆ ಉತ್ಸವ ಬಲಿ, ರಾತ್ರಿ 10ಕ್ಕೆ ವಿಶೇಷ ವಿದ್ಯುತ್ ದೀಪಾಲಂಕೃತಗೊಂಡ ಕ್ಷೇತ್ರದ ಕೆರೆಯಲ್ಲಿ ಶ್ರೀದೇವರ ಅವಭೃತ ಸ್ನಾನ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ ನಡೆಯುವುದು.
ಮಧೂರು ವಾರ್ಷಿಕ ಜಾತ್ರಾಮಹೋತ್ಸವಕ್ಕೆ ಧ್ವಜಾರೋಹಣ: ಇಂದು ವಿಷುಕಣಿ ಉತ್ಸವ
0
April 14, 2023