ಅಹಮದಾಬಾದ್: ಗುಜರಾತ್ನ ಅದಾಲಜ್ನಲ್ಲಿ ರಸ್ತೆ ಬದಿಯ ಪಾನಿಪುರಿ ಅಂಗಡಿಯಲ್ಲಿ ಹತ್ತು ನಿಮಿಷ ಪ್ರಯಾಣಿಕರಿದ್ದ ಬಸ್ ನಿಲ್ಲಿಸಿ, ಪಾನಿಪುರಿ ಸೇವಿಸಿದ ಬಿಆರ್ಟಿಎಸ್ ಚಾಲಕನೊಬ್ಬ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾನೆ ಎಂದು timesofindia.com ವರದಿ ಮಾಡಿದೆ.
ಕಳೆದ ಶನಿವಾರ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದರಿಂದಾಗಿ ಸ್ಥಳೀಯ ಸಂಸ್ಥೆಯು ಚಾಲಕ ಹಾಗೂ ಬಸ್ ನಿರ್ವಹಣಾ ಸಂಸ್ಥೆ ವಿರುದ್ಧ ಕ್ರಮ ಕೈಗೊಂಡಿದೆ.
ಮೂಲಗಳ ಪ್ರಕಾರ, ಝುಂದಲ್-ತ್ರಿಮಂದಿರ್ ಮಾರ್ಗವಾಗಿ ಸಂಚರಿಸುವ ಬಿಆರ್ಟಿಎಸ್ ಬಸ್ನ ಚಾಲಕ ನೀಲೇಶ್ ಪಾರ್ಮರ್, ಸ್ವಾಗತ್ ಸಿಟಿ ಸೊಸೈಟಿ ಬಳಿ ರಸ್ತೆ ಬದಿಯಲ್ಲಿನ ಪಾನಿಪೂರಿ ಅಂಗಡಿಯಲ್ಲಿ ಪಾನಿಪೂರಿ ಸೇವಿಸಲು ಬಸ್ ನಿಲುಗಡೆ ಮಾಡಿದ್ದಾನೆ. ಇದರಿಂದ ಬಸ್ನಲ್ಲಿದ್ದ ಪ್ರಯಾಣಿಕರು ಸುಮಾರು 10 ನಿಮಿಷ ಕಾಯಬೇಕಾಗಿ ಬಂದಿದೆ. ಈ ಪೈಕಿ ಓರ್ವ ಪ್ರಯಾಣಿಕ ಪಾರ್ಮರ್ ಪಾನಿಪುರಿ ತಿನ್ನುತ್ತಿರುವ ವಿಡಿಯೊ ಚಿತ್ರೀಕರಣ ಮಾಡಿ, ಅದನ್ನು ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಂಚಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಈ ವಿಷಯ ಬಿಆರ್ಟಿಎಸ್ ಜನ್ಮಾರ್ಗ್ ಲಿ. ಅಧಿಕಾರಿಗಳ ಗಮನಕ್ಕೆ ಬಂದು, ಅವರು ಬಸ್ ನಿರ್ವಹಣಾ ಸಂಸ್ಥೆಗೆ ರೂ. 15,000 ಹಾಗೂ ಪಾರ್ಮರ್ಗೆ ರೂ. 1,000 ದಂಡ ವಿಧಿಸಿದ್ದು, ಪಾರ್ಮರ್ನನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಪ್ರಿಲ್ 1ರಂದು ಈ ಘಟನೆ ನಡೆದಿರುವುದನ್ನು ಬಿಆರ್ಟಿಎಸ್ ಜನ್ಮಾರ್ಗ್ ಲಿ.ನ ಸಹಾಯಕ ಆಯುಕ್ತ ವಿಶಾಲ್ ಖಾನಮಾ ದೃಢಪಡಿಸಿದ್ದು, "ನಾವು ಬಸ್ ನಿರ್ವಹಣಾ ಸಂಸ್ಥೆಗೆ ರೂ. 15,000 ದಂಡ ವಿಧಿಸಿದ್ದು, ಚಾಲಕನನ್ನು ಅಮಾನತುಗೊಳಿಸಲಾಗಿದೆ" ಎಂದು ತಿಳಿಸಿದ್ದಾರೆ.