ಉಪ್ಪಳ : ದಾವಣಗೆರೆಯ ಕಲಾಕುಂಚ ಸಂಘಟನೆಯ ಕಾಸರಗೋಡು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮಂಗಲ್ಪಾಡಿಯ ಶಾರದಾ ಭಜನಾ ಮಂದಿರದಲ್ಲಿ ಮಕ್ಕಳಿಗಾಗಿ ವ್ಯಂಗ್ಯಚಿತ್ರ ರಚನೆಯ ಏಕದಿನ ಬೇಸಿಗೆ ಶಿಬಿರವು ಇತ್ತೀಚೆಗೆ ನಡೆಯಿತು. ನಿವೃತ್ತ ಪ್ರಾಂಶುಪಾಲ ಪ್ರೊ. ಪಿ ಎನ್ ಮೂಡಿತ್ತಾಯರು ಶಿಬಿರವನ್ನು ದೀಪಬೆಳಗಿಸಿ, ವ್ಯಂಗ್ಯಚಿತ್ರ ಬಿಡಿಸಿ ಉದ್ಘಾಟಿಸಿದರು. ಶಿಕ್ಷಣ ತಜ್ಞ ವಿ ಬಿ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡಿನ ವ್ಯಂಗ್ಯಚಿತ್ರಗಾರರಾದ ವಿರಾಜ್ ಅಡೂರು ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವ್ಯಂಗ್ಯಚಿತ್ರ ರಚನೆಯ ಕುರಿತು ಮಾಹಿತಿ ನೀಡಿದರು. ವ್ಯಂಗ್ಯಚಿತ್ರಗಳನ್ನು ಬರೆಯುವಾಗ ಗಮನಿಸಬೇಕಾದ ಅಂಶಗಳು, ವ್ಯಂಗ್ಯ ಚಿತ್ರ ಬೆಳೆದು ಬಂದ ದಾರಿ, ವ್ಯಂಗ್ಯಚಿತ್ರಗಳನ್ನು ಬರೆಯವಾಗ ಮಾಡಬೇಕಾದ ಸಿದ್ಧತೆಗಳು, ನಿಬಂಧನೆಗಳು ಹಾಗೂ ವಿಚಾರಗಳಿಗೆ ಅನುಗುಣವಾಗಿ ಚಿತ್ರಗಳಲ್ಲಿ ಭಾವನೆಗಳನ್ನು ಹೊಮ್ಮಿಸುವ ರೀತಿ ಮೊದಲಾದ ವಿಚಾರಗಳ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು.
ಸಭೆಯಲ್ಲಿ ಕಲಾಕುಂಚ ಕೇರಳ ಗಡಿನಾಡ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ ಕಾರಂತ್ ಹಾಗೂ ರಾಮ ಕಾರಂತ ಕೋರ್ತಿಮಾರು ಉಪಸ್ಥಿತರಿದ್ದರು. ಅಪರಾಹ್ನ ನಡೆದ ಶಿಬಿರದ ಚಟುವಟಿಕೆಯಲ್ಲಿ ಇಡೀ ಶಿಬಿರದ ಕುರಿತು ರಸಪ್ರಶ್ನೆಯನ್ನು ಆಯೋಜಿಸಲಾಗಿತ್ತು. ರಸಪ್ರಶ್ನೆ ವಿಜೇತರಿಗೆ, ಉತ್ತಮ ಶಿಬಿರಾರ್ಥಿ ಹಾಗೂ ಸ್ಥಳದಲ್ಲೇ ಚಿತ್ರ ಬಿಡಿಸಿದ ಆಯ್ದ ವಿದ್ಯಾರ್ಥಿಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಸುಮಾರು 20ಕ್ಕೂ ಹೆಚ್ಚು ಮಂದಿ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ಶಶಿಕಲಾ ಮಯ್ಯ ಸ್ವಾಗತಿಸಿದರು. ಜಯಲಕ್ಷ್ಮಿ ಆರ್ ಹೊಳ್ಳ ವಂದಿಸಿದರು.