ಕಾಸರಗೋಡು: ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣ ಸಿಬಿಐ ನ್ಯಾಯಾಲಯದಲ್ಲಿ ಖುಲಾಸೆಗೊಳ್ಳುತ್ತಿದ್ದಂತೆ ಮತ್ತೆ ಈ ವಾದ ನ್ಯಾಯದೇಗುಲ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದತ್ತ ಮುಖ ಮಾಡಿದೆ.
ಧೀರಜ್ ಜೈನ್, ಮಲ್ಲಿಕ್ ಜೈನ್ ಹಾಗೂ ಉದಯ್ ಜೈನ್ ಎಂಬವರು ಕಾನತ್ತೂರು ಕ್ಷೇತ್ರಕ್ಕೆ ಭೇಟಿ ನೀಡಿ, ಸೌಜನ್ಯ ಪ್ರಕರಣದ ಬಗ್ಗೆ ಪ್ರಮಾಣ ಮಾಡಲು ದಿನಾಂಕ ಒಂದನ್ನು ನಿಗದಿಪಡಿಸುವಂತೆ ದೇವಸ್ಥಾನ ಆಡಳಿತ ಮಂಡಳಿಯನ್ನು ವಿನಂತಿಸಿಕೊಂಡಿದ್ದಾರೆ.
ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ದೇಗುಲದಲ್ಲಿ ದೂರು ನೀಡಿದ್ದು, ಅದು ಅರ್ಧಕ್ಕೆ ಸ್ಥಗಿತಗೊಂಡಿದೆ. ಮತ್ತೊಮ್ಮೆ ಆಣೆ ಪ್ರಮಾಣ ಮಾಡುವುದಿದ್ದಲ್ಲಿ, ಎರಡೂ ಕಡೆಯವರು ಉಪಸ್ಥಿತರಿದ್ದು ಎರಡೂ ಕಡೆಯವರು ಸ್ವ ಇಚ್ಛೆಯಿಂದ ಪ್ರಮಾಣ ಮಾಡಿಕೊಳ್ಳಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ. ಸೌಜನ್ಯ ಪ್ರಕರಣದಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ಮದ್ಯಮದವರ ಮುಂದೆ ಈಗಾಗಲೇ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ವಿಠಲ ಗೌಡ ಅವರು ತಿಳಿಸಿರುವಂತೆ ಕಾನತ್ತೂರಿಗೆ ತೆರಳಿ ಆಣೆ ಪ್ರಮಾಣ ಮಾಡಲು ಸಿದ್ಧರಿದ್ದಲ್ಲಿ ಇದಕ್ಕೆ ದಿನ ನಿಗದಿಪಡಿಸಿ ಪ್ರಮಾಣ ಮಡಲು ತಾವೂ ಸಿದ್ಧರಿರುವುದಾಗಿ ಧೀರಜ್ ಜೈನ್, ಮಲ್ಲಿಕ್ ಜೈನ್ ಹಾಗೂ ಉದಯ್ ಜೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ನ್ಯಾಯಾಲಯದಲ್ಲಿ ಖುಲಾಸೆಗೊಂಡಿರುವ ಪ್ರಕರಣದ ಬಗ್ಗೆ ಇನ್ನೊಂದು ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸಬಹುದಾಗಿದೆ. ಸೌಜನ್ಯ ಪ್ರಕರಣದ ಬಗ್ಗೆ ಎರಡೂ ಕಡೆಯವರು ಅವರ ಸ್ವ ಇಚ್ಛೆಯಿಂದ ದೇವಸ್ಥಾನದಲ್ಲಿ ಪ್ರಮಾಣ ಮಾಡಿಕೊಳ್ಳಬಹುದು ಹೊರತು ಆಡಳಿತ ಮಂಡಳಿ ಕಡೆಯಿಂದ ಇದಕ್ಕೆ ವೇದಿಕೆ ಕಲ್ಪಿಸಲಾಗದು ಎಂದು ಆಡಳಿತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

