ಕಾಸರಗೋಡು: ಜಂಟಿ ಟ್ರೇಡ್ ಯೂನಿಯನ್ ಸಮಿತಿಯು ಕರೆನೀಡಿರುವ ರಾಷ್ಟ್ರವ್ಯಾಪಿ ಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಧರಣಿ ಕಾಞಂಗಾಡು ಅಲಾಮಿಪಳ್ಳಿಯಲ್ಲಿ ನಡೆಯಲಿರುವುದಾಗಿ ಮುಷ್ಕರ ಸಮಿತಿ ಕನ್ವೀನರ್ ಟಿ. ಕೆ ರಾಜನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯುವ ಮುಷ್ಕರದಲ್ಲಿ ಐದು ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಪಾಲ್ಗೊಳ್ಳುವರು. ಜಿಲ್ಲೆಯ 10 ಕಾರ್ಮಿಕ ಸಂಘಗಳ ಪ್ರತಿನಿಧಿಗಳು ಭಾಗವಹಿಸುವರು. ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಈಗಾಗಲೇ ವಾಹನ ಪ್ರಚಾರ ಜಾಥಾ ಮೂಲಕ ಜಿಲ್ಲೆಯಾದ್ಯಂತ ಮುಷ್ಕರದ ಸಂದೇಶ ಸಾರಲಾಗಿದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ದೇಶವಿರೋಧಿ ಮತ್ತು ಜನವಿರೋಧಿ ನೀತಿ ಸೇರಿದಂತೆ 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಧರಣಿ ನಡೆಸಲಾಗುತ್ತಿದೆ. ಕಳೆದ 9 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರ ಕಾರ್ಮಿಕ ಸಂಘಟನೆಗಳ ಅಹವಾಲನ್ನು ಪರಿಗಣಿಸಿಲ್ಲ. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ನಿರ್ಧಾರದ ಪ್ರಕಾರ, ಪ್ರತಿ ವರ್ಷ ತ್ರಿಪಕ್ಷೀಯ ಸಮ್ಮೇಳನ ಆಯೋಜಿಸಬೇಕೆಂಬ ನಿಬಂಧನೆಯನ್ನೂ ಕಾರ್ಯಗತಗೊಳಿಸಿಲ್ಲ. ಬದಲಾಗಿ ಕಾರ್ಮಿಕ ಸಂರಕ್ಷಣಾ ಕಾನೂನುಗಳನ್ನು ಕ್ರೋಡೀಕರಿಸಿ 4 ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ ಕಾರ್ಮಿಕರನ್ನು ಜೀತದಾಳುಗಳನ್ನಾಗಿ ಮಾಡುವ ಸ್ಥಿತಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಕಾರ್ಮಿಕ ಸಂಹಿತೆ ರದ್ದತಿ, ವಿದ್ಯುತ್ ಖಾಸಗೀಕರಣ ಕಾಯ್ದೆ ರದ್ದತಿ, ಸಾರ್ವಜನಿಕ ವಲಯದ ಉದ್ದಿಮೆಗಳ ಸಂರಕ್ಷಣೆ, ಆದಾಯ ತೆರಿಗೆ ಕಟ್ಟದ ಎಲ್ಲ ಕುಟುಂಬಗಳಿಗೆ ಮಾಸಿಕ 7500 ರೂ. ಧನಸಹಾಯ, ಉದ್ಯೋಗ ಖಾತ್ರಿ ಯೋಜನೆ ಬಜೆಟ್ ಹಂಚಿಕೆ ಹೆಚ್ಚಳ, ಸ್ಕೀಮ್ ವರ್ಕರ್ಗಳಿಗೆ ಕನಿಷ್ಠ ವೇತನ ಖಾತ್ರಿಪಡಿಸುವುದು, ಬೆಲೆಯೇರಿಕೆ ನಿಯಂತ್ರಣ, ಗುತ್ತಿಗೆ ಕಾರ್ಮಿಕರ ಕಾಯಂಗೊಳಿಸುವುದು, ಕಾರ್ಮಿಕರ ವೇತನ ಖಾತ್ರಿಪಡಿಸುವುದು ಹೊಸ ಪಿಂಚಣಿ ಯೋಜನೆ ಕೈಬಿಡುವುದು ಮುಂತಾದ ಬೇಡಿಕೆ ಈಡೇರಿಸಲು ಮುಷ್ಕರ ಕೈಗೊಳ್ಳಲಾಗುತ್ತಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ವಿವಿಧ ಕಾರ್ಮಿಕ ಸಂಘಟನೆ ಮುಖಂಡರಾದ ಕೆ.ವಿ ಕೃಷ್ಣನ್, ನ್ಯಾಶನಲ್ ಅಬ್ದುಲ್ಲ, ಕರಿವೆಳ್ಳೂರ್ ವಿಜಯನ್ ಮೊದಲಾದವರು ಪಾಲ್ಗೊಂಡಿದ್ದರು.