ತಿರುವನಂತಪುರ: ರಾಜ್ಯ ಸೆಕ್ರಟರಿಯೇಟ್ ಇಂದಿಗೂ ತಂಬೂರಾನ್ ಗಳ(ಅರಸುಗಳ)À ಕೋಟೆಯಾಗಿಯೇ ಉಳಿದಿದೆ ಎಂದು ಶ್ರೀ ನಾರಾಯಣ ಧರ್ಮ ಸಂಗಮ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಶ್ರೀಸಚ್ಚಿದಾನಂದ ಅವರು ಟೀಕಿಸಿದ್ದಾರೆ.
ಸ್ವತಃ ಸಚಿವ ಮಹಮ್ಮದ್ ರಿಯಾಝ್ ವೇದಿಕೆಯಲ್ಲಿದ್ದೂ ಅವರೆದುರೇ ಸ್ವಾಮಿ ಶ್ರೀ ಸಚ್ಚಿದಾನಂದ ಅವರು ರಾಜ್ಯ ಸರ್ಕಾರವನ್ನು ಅತ್ಯಂತ ಕಟು ಭಾಷೆಯಲ್ಲಿ ಟೀಕಿಸಿದರು. ಶ್ರೀನಾರಾಯಣ ಗುರುದೇವರ 169ನೇ ಜಯಂತಿ ಅಂಗವಾಗಿ ಶಿವಗಿರಿಯಲ್ಲಿ ಆಯೋಜಿಸಿದ್ದ ಮಹಾ ಸಮ್ಮೇಳನದಲ್ಲಿ ಸ್ವಾಮಿಗಳು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಚಿವ ರಿಯಾಝ್ ಅವರ ಉದ್ಘಾಟನಾ ಭಾಷಣದ ನಂತರ ಸ್ವಾಮಿಗಳು ಅಧ್ಯಕ್ಷೀಯ ಭಾಷಣ ಮಾಡಿದರು. ಸ್ವಾಮಿ ಸಚ್ಚಿದಾನಂದ ಮಾತನಾಡಿ, ರಾಜ್ಯದಲ್ಲಿ ಎರಡು ರಂಗಗಳು ಪರ್ಯಾಯವಾಗಿ ಆಡಳಿತ ನಡೆಸಿದರೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಶ್ರೀ ನಾರಾಯಣ ಗುರುಗಳ ನೇತೃತ್ವದ ಸಾಮಾಜಿಕ ಚಳವಳಿಯು ಅವರ ಸಮಾಧಿಯೊಂದಿಗೆ ಕೊನೆಗೊಂಡಿತು. ಆ ನಂತರ ಕೇರಳ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಗುರು ನಿತ್ಯ ಚೈತನ್ಯ ಯತಿ ಅವರು ಕೇರಳದ ಸೆಕ್ರೆಟರಿಯೇಟ್ ಅನ್ನು ತಂಬುರಾನ್ ಕೋಟೆ ಎಂದು ಬಣ್ಣಿಸಿದ್ದರು. ತಂಬುರಾನ್ ಕೋಟೆಯಲ್ಲಿ ಯಾವುದೇ ದೊಡ್ಡ ಬದಲಾವಣೆ ಕಂಡುಬಂದಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ನಾರಾಯಣ ಗುರುಗಳ ದೈವದಶಕಕ್ಕೆ ರಾಷ್ಟ್ರೀಯ ಪ್ರಾರ್ಥನಾ ಗೀತೆ ಎಂದು ಮಾನ್ಯತೆ ನೀಡಬೇಕು ಎಂದು ಸ್ವಾಮಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಈ ಕುರಿತು ಶಿವಗಿರಿಯ ಸನ್ಯಾಸಿಗಳು ಈ ಹಿಂದೆ ರಾಜ್ಯವನ್ನು ಆಳಿದ ಎಲ್ಲಾ ಸಚಿವಾಲಯಗಳಿಗೆ ಮನವಿ ಸಲ್ಲಿಸಿದ್ದಾರೆ ಎಂದು ಸ್ವಾಮಿ ಸಚ್ಚಿದಾನಂದ ನೆನಪಿಸಿದರು.