ವಾರಾಣಸಿ : ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಲು ಎಂಟು ವಾರಗಳವರೆಗೆ ಕಾಲಾವಕಾಶ ವಿಸ್ತರಿಸುವಂತೆ ಕೋರಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್ಐ) ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಗೆ, ಮಸೀದಿಯ ನಿರ್ವಹಣಾ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ.
ಅಂಜುಮನ್ ಇಂತೇ ಜಾಮಿಯಾ ಮಸೀದಿ ಸಮಿತಿಯು ಸೋಮವಾರ ಆಕ್ಷೇಪಣಾ ಅರ್ಜಿ ಸಲ್ಲಿಸಿದೆ. ಸಮೀಕ್ಷೆ ನಡೆಸುವುದಷ್ಟೇ ಇಲಾಖೆಯ ಅಧಿಕಾರಿಗಳ ಕೆಲಸ. ಆದರೆ, ಯಾವುದೇ ಅನುಮತಿ ಇಲ್ಲದೆಯೇ ಮಸೀದಿ ಸಂಕೀರ್ಣದ ತಳಪಾಯ ಸೇರಿದಂತೆ ಹಲವೆಡೆ ಸಮೀಕ್ಷೆಗಾಗಿ ಅಗೆಯಲಾಗಿದೆ. ಇದು ಮಸೀದಿಯ ಸ್ವರೂಪಕ್ಕೆ ಅಪಾಯ ತರುತ್ತಿದೆ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ಎಎಸ್ಐ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟೆಂಬರ್ 8ಕ್ಕೆ ಮುಂದೂಡಿದೆ. ಮಸೀದಿಯ ಸಮೀಕ್ಷೆ ನಡೆಸಲು ವಾರಾಣಸಿ ಜಿಲ್ಲಾ ನ್ಯಾಯಾಲಯವು ಜುಲೈ 21ರಂದು ಸರ್ವೇಕ್ಷಣಾ ಇಲಾಖೆಗೆ ಅನುಮತಿ ನೀಡಿತ್ತು.