ಕಾಸರಗೋಡು: ರೈಲಿಗೆ ಕಲ್ಲುತೂರಾಟ ಪ್ರಕರಣದ ಬೆನ್ನಿಗೆ ಕಾಸರಗೋಡು ಸನಿಹ ನೆಲ್ಲಿಕುಂಜೆ ಬಳಿ ರೈಲ್ವೆ ಹಳಿಯಲ್ಲಿ ಕಲ್ಲನ್ನಿರಿಸಿದ ಘಟನೆ ಬೆಳಕಿಗೆ ಬಂದಿದೆ. ಕಾಸರಗೋಡು ರೈಲ್ವೆ ನಿಲ್ದಾಣದಿಂದ ಅನತಿ ದೂರದಲ್ಲಿ ಘಟನೆ. ರೈಲ್ವೆ ಹಳಿಯಲ್ಲಿರಿಸಿದ್ದ ಕಲ್ಲು, ರೈಲು ಸಂಚಾರದ ನಂತರ ಪುಡಿಯಾಗಿರುವುದು ಕಂಡುಬಂದಿದೆ. ಮಂಗಳೂರು-ಚೆನ್ನೈ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಹಾದುಹೋದ ನಂತರ ಕಲ್ಲು ಪುಡಿಯಾಗಿ ಕಂಡುಬಂದಿದೆ. ಹಳಿಯಲ್ಲಿರಿಸಿರುವುದು ಸಣ್ಣ ಕಲ್ಲುಗಳಾಗಿರುವುದರಿಂದ ಅಪಾಯವಿಲ್ಲದೆ ರೈಲು ಮುಂದಕ್ಕೆ ಸಾಗಿತ್ತು. ಕಲ್ಲಿನ ಮೇಲಿಂದ ರೈಲು ಸಾಗುತ್ತಿದ್ದಂತೆ ವಿಶೇಷ ರೀತಿಯ ಅಲುಗಾಟದ ಅನುಭವವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದಾಗ ಕಲ್ಲುಗಳು ಪುಡಿಯಾದ ಸ್ಥಿತಿಯಲ್ಲಿ ಕಂಡುಬಂದಿತ್ತು. ಸನಿಹದ ಮನೆಯೊಂದರಲ್ಲಿ ವಿವಾಹ ಸಮಾರಂಭ ನಡೆಯುತ್ತಿದ್ದು, ಇಲ್ಲಿಗೆ ಆಗಮಿಸಿದ ಮಕ್ಕಳು ರೈಲ್ವೆ ಹಳಿಯಲ್ಲಿ ಕಲ್ಲು ಇರಿಸಿರಬೇಕೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ರಾತ್ರಿ ನೇತ್ರಾವತಿ ಎಕ್ಸ್ಪ್ರೆಸ್ ರಐಲಿಗೆ ಕುಂಬಳೆ ಸನಿಹ ಶಿರಿಯದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಎರಡು ವಾರದ ಹಿಂದೆ ಕೊಯಂಬತ್ತೂರು-ಮಂಗಳೂರು ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ಸಂಚರಿಸುವ ಮಧ್ಯೆ ಕಳನಾಡು ಪ್ರದೇಶದಲ್ಲಿ ಕ್ಲೋಸೆಟ್ ಹಾಗೂ ಕೆಂಪುಕಲ್ಲನ್ನಿರಿಸಿ ಬುಡಮೇಲು ಕೃತ್ಯ ಎಸಗಲಾಗಿತ್ತು. ರೈಲುಗಳಿಗೆ ನಿರಂತರ ಕಲ್ಲು ತೂರಾಟ, ಹಳಿಯಲ್ಲಿ ಕಬ್ಬಿಣ, ಕಾಂಕ್ರೀಟ್ ತುಣುಕು, ಕಲ್ಲುಗಳನ್ನಿರಿಸುವ ಕೃತ್ಯ ನಡೆದುಬರುತ್ತಿದ್ದರೂ, ಆರೋಪಿಗಳ ಪತ್ತೆ ಸಾಧ್ಯವಾಗದಿರುವುದು ಆತಂಕಕ್ಕೆ ಕಾರಣವಾಗಿದೆ.