ತಿರುವನಂತಪುರಂ: ರಾಜ್ಯದಲ್ಲಿ ಇಂದು ಖಾಸಗಿ ಬಸ್ ಮುಷ್ಕರ ಆರಂಭಗೊಂಡಿದೆ. ಖಾಸಗಿ ಬಸ್ಸುಗಳ ಜಂಟಿ ಮುಷ್ಕರ ಸಮಿತಿಯು ತಮ್ಮ ಬೇಡಿಕೆಗಳ ಕುರಿತು ನೀಡಿರುವ ಪತ್ರವನ್ನು ಸಾರಿಗೆ ಸಚಿವರು ಪರಿಗಣಿಸದಿದ್ದರೆ ಮುಂದಿನ ತಿಂಗಳು 21ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿಯೂ ಮುಷ್ಕರ ಸಮಿತಿ ಮುಖಂಡರು ಘೋಷಿಸಿದ್ದಾರೆ.
ವಿದ್ಯಾರ್ಥಿಗಳ ಪ್ರಯಾಣ ದರ ಏರಿಕೆ, ಬಸ್ ಗಳಲ್ಲಿ ಸೀಟ್ ಬೆಲ್ಟ್, ಕ್ಯಾಮೆರಾ ಅಳವಡಿಸುವ ನಿರ್ಧಾರ ಬದಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಮಿತಿ ಸಾರಿಗೆ ಸಚಿವರಿಗೆ ಪತ್ರ ಬರೆದಿದೆ. ಆದರೆ ಬಸ್ ಗಳಲ್ಲಿ ಕ್ಯಾಮೆರಾ ಅಳವಡಿಸಬೇಕೆಂಬ ಬೇಡಿಕೆಯನ್ನು ಬಸ್ ಮಾಲೀಕರೇ ಮುಂದಿಟ್ಟಿದ್ದಾರೆ ಎಂದು ಸಾರಿಗೆ ಸಚಿವರು ವಾದಿಸಿದರು. ಬಸ್ಸಿನ ಸಿಬ್ಬಂದಿಗಳು ರಸ್ತೆ ಅಪಘಾತದಲ್ಲಿ ಆರೋಪಿಗಳಾಗುವುದನ್ನು ತಡೆಯಲು ಹಾಗೂ ನಿಜವಾದ ಆರೋಪಿಗಳನ್ನು ಪತ್ತೆ ಮಾಡಲು ಬಸ್ಸುಗಳಿಗೆ ಕ್ಯಾಮೆರಾ ಅಳವಡಿಸಬೇಕು ಎಂದು ಬಸ್ ಮಾಲೀಕರೇ ಹೇಳಿದ್ದಾರೆ ಎಂದು ಸಚಿವ ಆಂಟನಿರಾಜು ಮಾಹಿತಿ ನೀಡಿದರು.
ಇದೇ ವೇಳೆ ಬಸ್ ಮುಷ್ಕರ ಘೋಷಣೆಯಾದ ಬಳಿಕ ಶ್ರೀಶಂಕರಾಚಾರ್ಯ ಸಂಸ್ಕøತ ವಿಶ್ವವಿದ್ಯಾಲಯದಲ್ಲಿ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮುಂದೂಡಲ್ಪಟ್ಟ ಪರೀಕ್ಷೆಗಳು ನವೆಂಬರ್ 3 ರಂದು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ನಡೆಯಲಿದೆ.