ಪತ್ತನಂತಿಟ್ಟ: ಶಬರಿಮಲೆ ಹಾಗೂ ಮಾಳಿಗಪ್ಪುರಂ ಸನ್ನಿಧಿಯ ಮುಂದಿನ ಒಂದು ವರ್ಷದ ಅವಧಿಗೆ ಮೇಲ್ಶಾಂತಿ ನೇಮಕಕ್ಕೆ ಬುಧವಾರ ಚೀಟಿಎತ್ತುವ ಮೂಲಕ ಆಯ್ಕೆ ನಡೆಯಿತು. ಮೂವಾಟ್ಟುಪ್ಪುಳ ಏಲನಲ್ಲೂರು ಪುತ್ತಿಲ್ಲಾತ್ ನ ಪಿ.ಎನ್.ಮಹೇಶ್ ನಂಬೂದಿರಿ ಅವರು ಶಬರಿಮಲೆಗೆ ಮೇಲ್ಶಾಂತಿಯಾಗಿ ಆಯ್ಕೆಯಾಗಿದ್ದಾರೆ. ಮಾಳಿಗಪ್ಪುರಂಗೆ ಪಿ.ಜಿ.ಮುರಳಿ ಮೇಲ್ಶಾಂತಿಯಾಗಿ ಆಯ್ಕೆಯಾದರು. ಮುರಳಿ ತ್ರಿಶೂರ್ ಮೂಲದವರು. ಮಹೇಶ್ ಮೊದಲ ಡ್ರಾದಲ್ಲಿ ಮೇಲ್ಶಾಂತಿಯಾಗಿ ಆಯ್ಕೆಯಾದರು.
ಶಬರಿಮಲೆ ಮೇಲ್ಶಾಂತಿಗಳ ಅಂತಿಮ ಪಟ್ಟಿಯಲ್ಲಿ 17 ಹೆಸರುಗಳಿದ್ದವು. ಇವರಲ್ಲಿ ಮಹೇಶ್ ನಂಬೂದಿರಿ ಚೀಟಿ ಎತ್ತುವ ಮೂಲಕ ಆಯ್ಕೆಯಾದರು. ಮಾಳಿಗಪ್ಪುರಂ ಮೇಲ್ಶಾಂತಿ ಪಟ್ಟಿಯಲ್ಲಿದ್ದ 12 ಮಂದಿಯಲ್ಲಿ ಪಿ.ಜಿ.ಮುರಳಿ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ತ್ರಿಶೂರ್ ತೊಝಿಯೂರು ವಡಕ್ಕೆಕಟ್ ಪೂಕಾಟ್ ಮನೆಯವರು. ಏಳನೇ ಡ್ರಾದಲ್ಲಿ ಅವರು ಮೇಲುಗೈ ಸಾಧಿಸಿದರು.
ಪಂದಳಂ ಅರಮನೆಯಿಂದ ಆಗಮಿಸಿದ ವೈದೇಹಿ ಎಂ ವರ್ಮಾ ಶಬರಿಮಲೆ ಮೇಲ್ಶಾಂತಿ ಆಯ್ಕೆಯ ಚೀಟಿ ಎತ್ತಿದರು. ನಿರುಪಮಾ ಜಿ ವರ್ಮಾ ಅವರು ಮಾಳಿಗಪ್ಪುರಂ ಮೇಲ್ಶಾಂತಿಯ ಡ್ರಾದ ಚೀಟಿ ಎತ್ತಿದರು. ಎರಡೂ ಸನ್ನಿಧಿಗಳ ಮೇಲ್ಶಾಂತಿಗಳು ವೃಶ್ಚಿಕ 1 ರಿಂದ ಮುಂದಿನ ಒಂದು ವರ್ಷದ ಅವಧಿಗೆ ಆಯ್ಕೆಯಾಗಿರುವರು.