ಕಾಸರಗೋಡು: ಚೀಮೇನಿ ಪಂಚಾಯಿತಿಯ ಪೋತಾನ್ಕಂಡ ಅರಿಯಿಟ್ಟಪಾರ ಪ್ರದೇಶದಲ್ಲಿ ಉದ್ದೇಶಿತ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಯ ಯೋಜನೆ ಕೈಬಿಡದಿದ್ದಲ್ಲಿ ಸಾಧು ಜನ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಪ್ರಬಲ ಹೋರಾಟ ನಡೆಸುವುದಾಗಿ ಸಾಧುಜನ ಪರಿಷತ್ತಿನ ರಾಜ್ಯಾಧ್ಯಕ್ಷ ಅನೀಶ್ ಪಯ್ಯನ್ನೂರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಂಡೋಸಲ್ಫಾನ್ ದುರಂತದಿಂದ ದೀರ್ಘಕಾಲದ ಸಮಸ್ಯೆ ಎದುರಿಸುತ್ತಿರುವ ಕಾಸರಗೋಡಿನ ಜನತೆ ಅದೇ ರೀತಿಯ ಭೀತಿಯ ವಾತಾವರಣವನ್ನು ತ್ಯಾಜ್ಯ ಸಂಸ್ಕರಣಾ ಘಟಕದಿಂದಲೂ ಎದುರಿಸಬೇಕಾದ ಸಂದಿಗ್ಧಾವಸ್ಥೆ ಎದುರಾಗಲಿದೆ. ಪೆÇೀತಂಕಂಡಂ ಅರಿಯಿಟ್ಟಪಾರದಲ್ಲಿ ಆರಂಭಿಸಲು ಉದ್ದೇಶಿಸಿರುವ ತ್ಯಾಜ್ಯ ಸಂಸ್ಕರಣಾ ಯೋಜನೆಯನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ಪ್ರಸಕ್ತ ಯೋಜನೆಯ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿ ನ.13ರಂದು ಬೆಳಗ್ಗೆ 10ಕ್ಕೆ ಸ್ಥಳೀಯ ಗ್ರಾಮ ಕಚೇರಿ ಎದುರು ಪ್ರತಿಭಟನಾ ಧರಣ ಹಮ್ಮಿಕೊಳ್ಳಲಾಗುವುದು.
ಅರಿಯಿಟ್ಟಪಾರ ಪ್ರದೇಶದ ಬುಡಕಟ್ಟು ಜನಾಂಗದ ಜೀವನ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಹಾಗೂ ನೂರಾರು ಮಂದಿಗೆ ಶುದ್ಧ ಕುಡಿಯುವ ನೀರು ಒದಗಿಸುತ್ತಿರುವ ಇಲ್ಲಿನ ಜಲಮೂಲವನ್ನು ಕಲುಷಿತಗೊಳಿಸುವ ಈ ಯೋಜನೆಯನ್ನು ಯಾವುದೇ ಬೆಲೆತೆತ್ತಾದರೂ ಎದುರಿಸಲಾಗುವುದು. ಇಲ್ಲಿನ ಜನರು ಕುಡಿಯುವ ನೀರಿಗಾಗಿ ಅವಲಂಬಿಸಿರುವ ಕೆರೆ ಮತ್ತು ಪ್ರಾಚೀನ ಕಾಲದಿಂದಲೂ ಆರಾಧಿಸಿಕೊಂಡು ಬರುತ್ತಿರುವ ಪವಿತ್ರ ಬನಗಳನ್ನು ನಾಶಮಾಡಲು ಅವಕಾಶ ನೀಡುವುದಿಲ್ಲ. ಇಲ್ಲಿ ಆರಂಭಿಸುವ ತ್ಯಾಜ್ಯ ಸಂಸ್ಕರಣಾ ಘಟಕ ಇಡೀ ಊರಿಗೆ ಆಪತ್ತು ತಂದೊಡ್ಡಲಿದೆ. ಏಳಿಮಲೆ ನಾವಿಕ ಸೇನೆ, ಸಿಆರ್ಪಿಎಫ್ನಂತಹ ರಾಷ್ಟ್ರ ಸೇವೆ ಮಾಡುವ ಅಧಿಕಾರಿಗಳು ಇಲ್ಲಿನ ನೀರನ್ನೇ ಕುಡಿಯಲು ಅವಲಂಬಿಸಿದ್ದು, ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಹಿ ಸಂಗ್ರಹ ಅಭಿಯಾನವನ್ನೂ ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಧುಜನ ಪರಿಷತ್ತಿನ ಉಪಾಧ್ಯಕ್ಷ ಶ್ರೀನಿವಾಸನ್, ಪ್ರಧಾನ ಕಾರ್ಯದರ್ಶಿ ರಾಘವನ್, ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಉಪಾಧ್ಯಕ್ಷ. ಪಲ್ಲಿಯಾಡ್ ಪದ್ಮನಾಭನ್, ರಾಜೇಶ್, ಪ್ರಣವ್, ಸರೀಶ್ ಎಂ ಉಪಸ್ಥಿತರಿದ್ದರು.

