ಕೋಟಾ: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕೇವಲ ನಾಲ್ಕು ದಿನಗಳು ಬಾಕಿ ಇದ್ದು, ಇಲ್ಲಿಯ ಕೋಟಾ ನಗರದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವ ವಿಷಯ ಈಗ ಮಹತ್ವ ಪಡೆದಿದೆ. ಈ ಯೋಜನೆಯು ಇನ್ನೂ ಫಲದಾಯಕವಾಗದ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.
ರಾಜ್ಯದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರ ಆಪ್ತ, ಕಾಂಗ್ರೆಸ್ನ ಶಾಂತಿ ಧಾರಿವಾಲ್ ಮತ್ತು ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ನಿಷ್ಠ, ಬಿಜೆಪಿಯ ಪ್ರಲ್ಹಾದ್ ಗುಂಜಲ್ ಅವರು ಕಣದಲ್ಲಿರುವ ಉತ್ತರ ಕೋಟಾ ಕ್ಷೇತ್ರದಲ್ಲಿ ವಿಮಾನ ನಿಲ್ದಾಣ ಯೋಜನೆಯು ಚುನಾವಣಾ ಪ್ರಚಾರದ ಪ್ರಮುಖ ವಸ್ತುವಾಗಿದೆ.
ಕೋಟಾದಲ್ಲಿ ಸದ್ಯ ಕಡಿಮೆ ವಿಸ್ತೀರ್ಣದ ವಿಮಾನ ನಿಲ್ದಾಣವಿದ್ದು, ಕೇವಲ ವಿಶೇಷ ವಿಮಾನಗಳು ನಿಲುಗಡೆ ಆಗುತ್ತವೆ. ಕೋಟಾದಲ್ಲಿ ಸುಸಜ್ಜಿತವಾದ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಮತ್ತು ಅಲ್ಲಿ ವಾಣಿಜ್ಯ ಬಳಕೆಯ ವಿಮಾನಗಳು ಕಾರ್ಯಾಚರಿಸಬೇಕು ಎಂಬುದು ಸ್ಥಳೀಯರ ಬಹುದಿನದ ಬೇಡಿಕೆಯಾಗಿದೆ.
2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲೂ ಈ ವಿಷಯ ಮುನ್ನೆಲೆಗೆ ಬಂದಿತ್ತು. 2019ರ ಲೋಕಸಭೆ ಚುನಾವಣೆಯಲ್ಲೂ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗಿದ್ದವು.
ಜೆಇಇ, ನೀಟ್ನಂಥ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ಪಡೆಯಲು ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿವರ್ಷವೂ ಕೋಟಾಕ್ಕೆ ಆಗಮಿಸುತ್ತಾರೆ. ದೂರದ ರಾಜ್ಯಗಳಿಂದ ಬರುವವರು ದೆಹಲಿ, ಜೈಪುರ ಅಥವಾ ಉದಯಪುರದ ಮೂಲಕ ಕೋಟಾಕ್ಕೆ ಬರುತ್ತಾರೆ. ಕೋಟಾದಲ್ಲೇ ವಿಮಾನ ನಿಲ್ದಾಣವಾದರೆ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಅನುಕೂಲವಾಗುತ್ತದೆ ಎಂಬುದು ವಿದ್ಯಾರ್ಥಿಗಳು ಮತ್ತು ಪೋಷಕರ ಅಭಿಪ್ರಾಯ.
ಆರೋಪ, ಪ್ರತ್ಯಾರೋಪ: ಈ ಯೋಜನೆ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಗುಂಜಲ್, 'ವಿಮಾನ ನಿಲ್ದಾಣಕ್ಕೆ ಭೂಮಿ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಸರ್ಕಾರ ಇನ್ನೂ ಭೂಮಿ ನೀಡಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಆದ್ಯತೆ ಮೇರೆಗೆ ವಿಮಾನ ನಿಲ್ದಾಣ ನಿರ್ಮಿಸುತ್ತೇವೆ' ಎಂದಿದ್ದಾರೆ.
ಕ್ಷೇತ್ರದ ಹಾಲಿ ಶಾಸಕ, ಕಾಂಗ್ರೆಸ್ನ ಧಾರೀವಾಲ್ ಅವರು, ಈ ಯೋಜನೆಯನ್ನು ಕೇಂದ್ರ ಸರ್ಕಾರವೇ ತಡೆಹಿಡಿದಿದೆ ಎಂದು ಆರೋಪಿಸಿದ್ದಾರೆ.
ಯೋಜನೆ ಕುರಿತು ಸೆಪ್ಟೆಂಬರ್ನಲ್ಲಿ ಮಾತನಾಡಿದ್ದ ಅಶೋಕ್ ಗೆಹಲೋತ್ ಅವರು, ಪ್ರಸ್ತಾವಿತ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣವು ವಿಳಂಬವಾಗುತ್ತಿರುವುದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ದೂರಿದ್ದರು. ನಿರ್ಮಾಣದ ಹೆಗ್ಗಳಿಕೆಯನ್ನು ರಾಜ್ಯ ಸರ್ಕಾರ ಪಡೆಯುತ್ತದೆ ಎಂಬ ಭಯದಿಂದ ಸ್ಥಳೀಯ ಸಂಸದ ಓಂ ಬಿರ್ಲಾ ಅವರು ಈ ಕುರಿತು ಉತ್ಸಾಹ ತೋರುತ್ತಿಲ್ಲ ಎಂದು ಆರೋಪಿಸಿದ್ದರು.
ಈಗ ಈ ವಿಚಾರವು ಜನರ ಗಮನವನ್ನೂ ಸೆಳೆದಿದೆ. ಕೋಟಾಕ್ಕೆ ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಜನರೇ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ.