ಮಂಗಳೂರು: ಸಹ ಸಾಲ ವಿತರಣೆಗಾಗಿ ಕರ್ಣಾಟಕ ಬ್ಯಾಂಕ್ 'ಸ್ಯಾಟಿನ್ ಕ್ರೆಡಿಟ್ ಕೇರ್ ನೆಟ್ವರ್ಕ್ ಲಿಮಿಟೆಡ್ (ಎಸ್ಸಿಎನ್ಎಲ್) ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಕೃಷ್ಣನ್ ಎಚ್ ಮತ್ತು ಎಸ್ಸಿಎನ್ಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಚ್.ಪಿ ಸಿಂಗ್ ಬೆಂಗಳೂರಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.
ಇದರಿಂದ ಎರಡೂ ಸಂಸ್ಥೆಗಳ ಕಿರು (ರೀಟೇಲ್) ಸಾಲಗಾರರಿಗೆ ಗ್ರಾಹಕ ಕೇಂದ್ರಿತ ಹಣಕಾಸು ಸೌಲಭ್ಯಕ್ಕೆ ಅನುಕೂಲ ಆಗಲಿದೆ. ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಆರ್ಥಿಕವಾಗಿ ಸಕ್ರಿಯವಾಗಿರುವ ಮಹಿಳೆಯರ ಜಂಟಿ ಹೊಣೆಗಾರಿಕೆ ಗುಂಪುಗಳಿಗೆ (ಜೆಎಲ್ಜಿ) ಒಡಂಬಡಿಕೆಯಿಂದ ಸಹಾಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ಎಲ್ಲ ವಿಭಾಗಗಳಿಗೆ ಸಾಲದ ಹರಿವು ಸುಧಾರಿಸಲು ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳು ಆದ್ಯತಾ ವಲಯಕ್ಕೆ ಸಹ ಸಾಲ ನೀಡುವುದರ ಮೂಲಕ ಆರ್ಥಿಕ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು.
ಒಡಂಬಡಿಕೆ ಕುರಿತು ಮಾತನಾಡಿದ ಶ್ರಿಕೃಷ್ಣನ್ ಎಚ್ 'ಅಭಿವೃದ್ಧಿಯ ದೃಷ್ಟಿಯಿಂದ ವಿವಿಧ ಫಿನ್ ಟೆಕ್ ಕಂಪನಿಗಳೊಂದಿಗೆ ಬ್ಯಾಂಕ್ ಸಹಭಾಗಿತ್ವ ಹೊಂದಿದೆ. ಈ ಒಪ್ಪಂದ ಡಿಜಿಟಲ್ ಪರಿವರ್ತನೆಯ ಪ್ರಯಾಣಕ್ಕೆ ಅನುಗುಣವಾಗಿದೆ. ಸ್ಯಾಟಿನ್ ಜೊತೆಗಿನ ಒಡಂಬಡಿಕೆ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಮೈಕ್ರೊ ಕ್ರೆಡಿಟ್ ಸೌಲಭ್ಯ ಸುಧಾರಿಸಲಿದೆ. ಗ್ರಾಹಕರನ್ನು ತಲುಪಲು ಸಹಕಾರಿಯಾಗಿದೆ' ಎಂದರು.
ಸ್ಯಾಟಿನ್ ಕ್ರೆಡಿಟ್ ಕೇರ್ ನೆಟ್ವರ್ಕ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಶಿಶ್ ಮೆಹ್ರೋತ್ರಾ ಮಾತನಾಡಿ 'ಈ ಒಡಂಬಡಿಕೆ ಮಹತ್ವದ ಮೈಲುಗಲ್ಲು ಆಗಲಿದ್ದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ಸ್ಪರ್ಶ ಹೆಚ್ಚಿಸಿ ಗ್ರಾಹಕರ ಅವಶ್ಯಕತೆಗಳಿಗೆ ವೇಗವಾಗಿ ಸ್ಪಂದಿಸಲು ನೆರವಾಗಲಿದೆ' ಎಂದರು.
ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ 'ಈ ಒಪ್ಪಂದ ಎರಡು ಕಡೆಯವರಿಗೂ ಅನುಕೂಲ ಮಾಡಲಿದೆ' ಎಂದರು.