ಕಾಸರಗೋಡು: ನವದೆಹಲಿಯ ಅಸೋಸಿಯೇಷನ್ ಫಾರ್ ಇಕಾನಾಮಿಕ್ ಗ್ರೋಥ್ ಸಂಘಟನೆಯು ಪತ್ರಿಕಾ ರಂಗದ ಸಮಗ್ರ ಸಾಧನೆಗೆ ಕೊಡಮಾಡುವ ಈ ಸಾಲಿನ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಕಾಸರಗೋಡಿನ ಪತ್ರಕರ್ತ, ಲೇಖಕ ರವಿ ನಾಯ್ಕಾಪು ಅವರನ್ನು ಆಯ್ಕೆ ಮಾಡಲಾಗಿದೆ. ಜ. 18ರಂದು ದುಬೈಯ ಬರ್ ದುಬಾಯಿಯಲ್ಲಿರುವ ಹಾಲಿಡೇ ಇನ್ ಹೊಟೇಲ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಶಸ್ತಿ ಪ್ರದಾನ ನಡೆಯುವುದು. ಕಳೆದ ಎರಡೂವರೆ ದಶಕಗಳಿಂದ ಪೂರ್ಣಕಾಲಿಕ ಪತ್ರಕರ್ತನಾಗಿರುವ ರವಿ ನಾಯ್ಕಾಪು ಅವರು ವಿವಿಧ ಪತ್ರಿಕೆ, ದೃಶ್ಯ ಮಾಧ್ಯಮಗಳಲ್ಲಿ ವರದಿಗಾರ, ಉಪ ಸಂಪಾದಕ, ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಹಲವು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ದಾನಗಂಗೆ, ಸ್ನೇಹಗಂಗೆ, ಗಾನಗಂಗೆ, ಸಾವಿರದ ಸಾಧಕ, ಸಮಾಜ ಸಂಪದ ಎಂಬಿವುಗಳು ಅವರ ಪ್ರಕಟಿತ ಕೃತಿಗಳಾಗಿದ್ದು, ಇವರ "ಸ್ನೇಹಗಂಗೆ" ಯು ಶ್ರೇಷ್ಠ ಸಮಾಜಮುಖಿ ಕೃತಿಗಿರುವ ಪುರಸ್ಕಾರಕ್ಕೆ ಪಾತ್ರವಾಗಿದೆ. ಅಲ್ಲದೆ ಪಠ್ಯ ಪುಸ್ತಕಕ್ಕೂ ಆಯ್ಕೆಯಾಗಿದೆ. ಕರ್ನಾಟಕ ಜಾನಪದ ಪರಿಷತ್ತಿನ ಕೇರಳ ಗಡಿನಾಡ ಘಟಕದ ಕೋಶಾಧಿಕಾರಿಯೂ ಕನ್ನಡ ಕಾರ್ಯಕ್ರಮಗಳ ನಿರೂಪಕರೂ ಆಗಿದ್ದಾರೆ.
ದುಬಾಯಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕಾಸರಗೋಡು ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ವಿಶೇಷ ಆಹ್ವಾನ ಲಭಿಸಿದ್ದು, ಸಂಘಟನೆ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಯಾದವ್ ತೆಕ್ಕೇಮೂಲೆ ಹಾಗೂ ಕೋಶಾಧಿಕಾರಿ ಪುರುಷೋತ್ತಮ ಪೆರ್ಲ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟನೆಯ ಕಾರ್ಯದರ್ಶಿ ಝಫರ್ ಶಮೀನ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.





