ಕುಂಬಳೆ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜಂಟಿ ಯೋಜನೆಯೊಂದರ ಭಾಗವಾಗಿ ದೇಶದಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅನ್ನಶಾಲೆ ಮತ್ತು ಉಗ್ರಾಣವನ್ನು (ಕಿಚನ್ ಕಂ ಸ್ಟೋರ್ ರೂಂ)ನಿರ್ಮಿಸುತ್ತಿದ್ದು, ಕುಂಬಳೆ ಉಪಜಿಲ್ಲಾ ವಲಯದಲ್ಲಿ ನಾಲ್ಕನೆಯದಾಗಿ ಚೇಡಿಕಾನ ಅನುದಾನಿತ ಬುನಾದಿ ಕಿರಿಯ ಶಾಲೆಯಲ್ಲಿ ಪೂರ್ತಿಗೊಳಿಸಿದ ಪಾಕಶಾಲಾ ಕಟ್ಟಡವನ್ನು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ್ ಅವರು ಉದ್ಘಾಟಿಸಿದರು. ಪಂಚಾಯತ್ ಸದಸ್ಯೆ ಝುಬೈದಾ ಅಧ್ಯಕ್ಷತೆ ವಹಿಸಿದ್ದರು. ತಾನು ಉದ್ಘಾಟಿಸಿದ ಎಲ್ಲ ಪಾಕಶಾಲಾ ಕೋಣೆಗಳಿಗಿಂತ ಈ ಶಾಲೆಯ ಕಿಚನ್ ಕಂ ಸ್ಟೋರ್ ರೂಂ ಸುಂದರವಾಗಿದೆ ಮತ್ತು ವಿಶಾಲವಾಗಿದೆ ಎಂದ ವಿದ್ಯಾಧಿಕಾರಿಗಳು, ಇದಕ್ಕೆ ಕಾರಣರಾದ ಶಾಲಾ ಪ್ರಬಂಧಕಿ ಅನಸೂಯ ವಿಠಲ್ ಶೆಟ್ಟಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಬೇಬಿ ಸವಿತಾ ಅವರು, ತಮ್ಮ ಇಪ್ಪತ್ತು ವರ್ಷಗಳ ಆಕಾಂಕ್ಷೆ ಪೂರ್ತಿಗೊಂಡಿದೆ ಮತ್ತು ನನ್ನ ಶಾಲೆಯ ದೊಡ್ಡ ಕೊರತೆಯೊಂದು ಪರಿಹರಿಸಲ್ಪಟ್ಟಿದೆ ಎಂದು ಭಾವನಾತ್ಮಕವಾಗಿ ನುಡಿದರು. 2022-23 ನೇ ಸಾಲಿನ ಉತ್ತಮ ರಕ್ಷಕ-ಶಿಕ್ಷಕ ಸಂಘ ಎಂದು ಗುರುತಿಸಿಕೊಂಡು ಹತ್ತು ಸಾವಿರ ಬಹುಮಾನ ಪಡೆಯಲು ಕಾರಣರಾದ ಪಿ.ಟಿ.ಎ. ಅಧ್ಯಕ್ಷ ನೌಫಾಲ್, ಗಂಗಾಧರ್, ದಾಮೋದರ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಲೈಬ್ರರಿ ಕೋಣೆಯನ್ನು ಉದ್ಘಾಟಿಸಲಾಯಿತು. ಒಂದನೇ ತರಗತಿಯ ಮಕ್ಕಳು ಬರೆದ ವಿವಿಧ ಬರಹಗಳನ್ನು ಬಿಡುಗಡೆ ಮಾಡಲಾಯಿತು.
ನೂತನ ಅಡಿಗೆ ಕೋಣೆಯ ಹೊಸ ಒಲೆಯಲ್ಲಿ ಉಕ್ಕಿಸಿದ ಹಾಲು-ಪಾಯಸವನ್ನು ಅತಿಥಿಗಳಿಗೆ, ರಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.