ಮಾರ್ಚ್ 22ಕ್ಕೆ ವಿಶ್ವ ನೀರಿನ ದಿನ. ಈ ವರ್ಷ ಬರಗಾಲ ಉಂಟಾಗಿದೆ ಎಲ್ಲಾ ಕಡೆ ನೀರಿಲ್ಲ ... ನೀರಿಲ್ಲ ಎಂದು ಜನರು ಪರದಾಡುತ್ತಿದ್ದರು. ಬೆಂಗಳೂರು ಅಂತೂ ಈ ಬಾರಿ ನಕರ ಕಂಡಿದೆ ಎಂದರೆ ತಪ್ಪಾಗುವುದು, ಎಲ್ಲರು ನೀರಿಗಾಗಿ ಪರದಾಡುತ್ತಿದ್ದಾರೆ.
ದುಡ್ಡಿದ್ದರೆ ಟ್ಯಾಂಕರ್ ನೀರು ಬರುತ್ತೆ, ದುಡ್ಡಿಲ್ಲ ಅಂದ್ರೆ ನೀರು ತರುವ ಸಂಕಷ್ಟ ಅಷ್ಟಿಟ್ಟಲ್ಲ. ನಾವು ನೀರನ್ನು ವ್ಯರ್ಥ ಮಾಡಬಾರದು, ಅದರಲ್ಲೂ ಈ ದಿನಗಳಲ್ಲಿ ನೀರನ್ನು ದುಡ್ಡಿನಂತೆ ನೋಡಿಕೊಂಡು ಖರ್ಚು ಮಾಡಬೇಕು, ಇಲ್ಲದಿದ್ದರೆ ಬದುಕು ಕಷ್ಟ... ಕಷ್ಟ.
ಹೋಳಿ ಹಬ್ಬದಲ್ಲಿ ನೀರನ್ನು ವ್ಯರ್ಥ ಮಾಡಬೇಡಿ
ಹೌದು ಹೋಳಿಯಾಟದಲ್ಲಿ ನೀರು ತುಂಬಾನೇ ಖರ್ಚು ಮಾಡುತ್ತೇವೆ. ಬಣ್ಣ ಕಲಿಸಲು ನೀರು ಬೇಕು, ನಂತರ ಮೈಗೆ ಬಣ್ಣ ಬಿದ್ದ ನೀರು ತೊಳೆಯಲು ತುಂಬಾನೇ ನೀರು ಬೇಕು. ಈ ಬಾರಿ ಬೆಂಗಳೂರಿನಲ್ಲಿ ಪೂಲ್ ಪಾರ್ಟೀಸ್ ಹಾಗೂ ಮಳೆ ಡ್ಯಾನ್ಸ್ ಮಾಡುವಂತಿಲ್ಲ ಸರ್ಕಾರ ಆದೇಶ ನೀಡಿದೆ.
ಬೆಂಗಳೂರಿನಲ್ಲಿ 14,000 ಬೋರ್ವೆಲ್ಗಳಿವೆ, ಅವುಗಳಲ್ಲಿ 6, 000 ಬೋರ್ವೆಲ್ಗಳಲ್ಲಿ ತೊಟ್ಟು ನೀರಿಲ್ಲ, ಸಂಪೂರ್ಣ ಬತ್ತಿ ಹೋಗಿದೆ. ಇನ್ನು ಬೆಂಗಳೂರಿಗರ ಜೀವನದಿ ಕಾವೇರಿ ಕೂಡ ಸರಿಯಾಗಿ ಮಳೆಯಿಲ್ಲದೆ ಒಣಗಿದೆ, ಹೀಗಾಗಿ ನೀರಿಗೆ ಅಭಾವ ಉಂಟಾಗಿದೆ. ಹೀಗಾಗಿ ನೀರಿಗೆ ಹಾಹಾಕಾರ ಉಂಟಾಗಿದೆ.
ಸ್ನಾನ ಮಾಡುವಾಗ ಶವರ್ ಬಳಸಬೇಡಿ
ಇನ್ನು ಸ್ನಾನ ಮಾಡುವಾಗ ಶವರ್ ಬಳಸಬೇಡಿ, ಶವರ್ ಬಳಸುವಾಗ ಎಷ್ಟು ನೀರು ಬಳಸುತ್ತಿದ್ದೇವೆ ಎಂಬುವುದು ಗೊತ್ತಾಗುವುದಿಲ್ಲ, ಆದ್ದರಿಂದ ಬಕೆಟ್ನಲ್ಲಿ ನೀರು ತುಂಬಿ ಬಳಸಿದಾಗ ನಾವು ಎಷ್ಟು ನೀರು ಬಳಸುತ್ತಿದ್ದೇವೆ ಎಂಬುವುದು ನಮಗೆ ಗೊತ್ತಾಗುವುದು, ಹೀಗೆ ನಾವು ನೀರನ್ನು ಮಿತವಾಗಿ ಬಳಸಬಹುದು. ಆದ್ದರಿಂದ ಈ ಬೇಸಿಗೆಯಲ್ಲಿ ಶವರ್ ಬಂದ್ ಮಾಡಿ ಸ್ನಾನಕ್ಕೆ ನೀರು ಮಿತವಾಗಿ ಬಳಸಿ.
ಗಾಡಿಗಳನ್ನು ತೊಳೆಯಬೇಡಿ
ಗಾಡಿಗಳನ್ನು ತೊಳೆಯಬೇಡಿ, ಗಾಡಿಗಳನ್ನು ಸ್ಚಚ್ಚಗೊಳಿಸಲು ಸ್ಪ್ರೇ ಸಿಗುವುದು ಅದನ್ನು ಬಳಸಿ, ಬದಲಿಗೆ ನೀವು ನೀರಿ ಬಳಸಿ ಗಾಡಿ ತೊಳೆದರೆ ದಂಡ ಕಟ್ಟಬೇಕಾಗುವುದು. ಆದ್ದರಿಂದ ಈ ಬರಗಾಲದಲ್ಲಿ ಗಾಡಿಗಳನ್ನು ತೊಳೆಯಲು ನೀರು ಬಲಸಬೇಡಿ, ಅದರಲ್ಲೂ ಬೆಂಗಳೂರಿನಲ್ಲಿ ವಾಸಿಸುವವರು ನೀರನ್ನು ಎಷ್ಟು ಮಿತವಾಗಿ ಖರ್ಚು ಮಾಡುತ್ತೀರೋ ಅಷ್ಟು ಒಳ್ಳೆಯದು.
ಪಕ್ಷಿಗಳಿಗೆ, ಪ್ರಾಣಿಗಳಿಗೆ ನೀರಿಡಿ
ಎಲ್ಲಿಯೂ ನೀರು ಸಿಗುತ್ತಿಲ್ಲ, ಮೂಕ ಜೀವಿಗಳಿಗೆ ನೀರು ಇಡುವುದು ಮಾನವೀಯತೆ ದೃಷ್ಟಿಯಿಂದ ತುಂಬಾ ಮುಖ್ಯವಾಗಿದೆ. ಹಾಗಾಗಿ ಮನೆಯ ಪಕ್ಕ, ಟೆರೇಸ್ನಲ್ಲಿ ಸ್ವಲ್ಪ ನೀರಿಡಿ. ಮನುಷ್ಯರೇ ನೀರಿಗಾಗಿ ಪರದಾಡುವಾಗ ಆ ಮೂಕ ಜೀವಿಗಳಿಗೆ ಎಷ್ಟು ಕಷ್ಟವಾಗಬೇಡ, ಹಾಗಾಗಿ ಅವುಗಳಿಗೆ ಸ್ವಲ್ಪ ನೀರು ಇಡಿ.
ನೀರನ್ನು ಮರುಬಳಕೆ ಮಾಡಿ
ಪಾತ್ರೆ ತೊಳೆದ ನೀರು ಅಥವಾ ಮನೆ ಬಳಕೆಗೆ ಬಳಸಿದ ನೀರನ್ನು ಗಿಡಗಳಿಗೆ ಬಳಸುವುದು ಒಳ್ಳೆಯದು. ಸಿಂಕ್ನಲ್ಲಿ ಪಾತ್ರೆ ತೊಳೆಯುವಾಗ ನೀರು ವ್ಯರ್ಥವಾಗುವುದು, ಆದ್ದರಿಂದ ಎರಡು ಬಕೆಟ್ ನೀರು ಹಾಕಿ, ಅದರಲ್ಲಿ ಪಾತ್ರೆ ತೊಳೆದರೆ ಆ ನೀರನ್ನು ಗಿಡಗಳಿಗೆ ಹಾಕಬಹುದು. ಈ ಬೇಸಿಗೆಯಲ್ಲಿ ಈ ರೀತಿ ನೀರನ್ನು ಮರುಬಳಕೆ ಮಾಡಬೇಕು.
ಮಳೆಗಾಲದಲ್ಲಿ ನೀರು ಭೂಮಿಯಲ್ಲಿ ಇಂಗುವಂತೆ ಮಾಡಿ
ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸುವ ತಂತ್ರಜ್ಞಾನವಿದೆ, ನೀರನ್ನು ಇಂಗುವಂತೆ ಮಾಡುವ ವ್ಯವಸ್ಥೆಯಿದೆ, ಇದರತ್ತ ಗಮನ ನೀಡಿ. ಹೀಗೆ ಮಾಡುವುದರಿಂದ ಅಂತರ್ಜಲ ಬತ್ತುವುದಿಲ್ಲ.
ಮಿತಿ ಮೀರಿ ಬೋರ್ವೆಲ್ ಕೊರೆಯುತ್ತಿರುವುದು, ಕೆರೆಗಳನ್ನು ಮುಚ್ಚಿ ಅಲ್ಲಿ ಕಟ್ಟಡ ನಿರ್ಮಾಣ ಹೀಗೆ ಅನೇಕ ಕಾರಣಗಳಿಂದ ಈಗ ಅಂತರ್ಜಲ ಬತ್ತಿದೆ. ಇನ್ಯಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಜನರು ತೀವ್ರ ಬರಗಾಲ ಎದುರಿಸಬೇಕು. ಕಾಡುಗಳನ್ನು ಬೆಳೆಸುವುದರ ಕಡೆಗೆ ಹಾಗೂ ಮಳೆ ನೀರು ಸಂಗ್ರಹಣೆ ಕಡೆಗೆ ಹೆಚ್ಚಿನ ಗಮನಹರಿಸಬೇಕು.