ಮುಳ್ಳೇರಿಯ: ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ದೀಪಪ್ರದಾನ ಕಾರ್ಯಕ್ರಮದ ಮೂಲಕ ನಡೆಸಲಾಯಿತು. ಗಣೇಶವತ್ಸ ನೆಕ್ರಾಜೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪದ್ಮಶ್ರೀ ಸತ್ಯನಾರಾಯಣ ಬೇಳೇರಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳೆಲ್ಲರಿಗೂ ದೀಪಗಳನ್ನು ನೀಡಿದರು. "ನಿರಂತರ ಓದುವುದರಿಂದ ಮತ್ತು ಉತ್ತಮ ವಿಷಯಗಳನ್ನು ಕೇಳುವುದರಿಂದ ಜ್ಞಾನವನ್ನು ಸಂಪಾದಿಸಬಹುದು" ಎಂದು ಅವರು ನುಡಿದರು.
ಶಾಲಾ ಹಳೆ ವಿದ್ಯಾರ್ಥಿ ಗಣೇಶ್ ಶೆಣೈ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಅಧ್ಯಾಪಕಿಯರಾದ ಮಿನಿ ಮತ್ತು ಉಷಾ ಮತ್ತು ಶಾಲಾ ಮುಖ್ಯೋಪಾಧ್ಯಾಯ ವೇಣುಗೋಪಾಲನ್ ವಿದ್ಯಾರ್ಥಿಗಳಿಗೆ ಶುಭಹಾರೈಸಿ, ತಮ್ಮ ಗುರಿಯನ್ನು ತಾವೇ ನಿರ್ಧರಿಸಬೇಕೆಂದು ಕಿವಿಮಾತನ್ನು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗಣೇಶವತ್ಸ ಮಾತನಾಡಿ 'ಈ ಶಾಲೆಯ ಮಹತ್ವ ಏನೆಂದು ಇಲ್ಲಿಂದ ಹೊರಹೋದ ಮೇಲೆ ತಿಳಿಯುತ್ತದೆ. ವಿದ್ಯಾರ್ಥಿಗಳೆಲ್ಲರ ಭವಿಷ್ಯವು ಉತ್ತಮವಾಗಿ ಎಲ್ಲರೂ ಸತ್ಪ್ರಜೆಗಳಾಗಿ ಬಾಳಬೇಕು' ಎಂದು ಹರಸಿದರು.
ಬಳಿಕ ಶಾಲಾ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ಹಂಸಿನಿ ಸ್ವಾಗತಿಸಿ, ತೇಜಸ್ವಿನಿ ವಂದಿಸಿದರು. ಅರ್ಚನಾ ಮತ್ತು ದಿಯಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಆಡಳಿತ ಸಮಿತಿ ಪ್ರಮುಖರು, ಶಾಲಾ ಅಧ್ಯಾಪಕ-ಅಧ್ಯಾಪಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಹೆತ್ತವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.