ಬದಿಯಡ್ಕ: ಸನಾತನ ಧರ್ಮದ ಮಹತ್ವವನ್ನರಿತು ಮುಂದುವರಿಯುವ ಪ್ರಜೆಗಳು ಬೆಳೆದು ಬರಬೇಕು. ಬಾಲ್ಯದಲ್ಲಿಯೇ ಮಕ್ಕಳನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರು ಉತ್ತಮ ಚಿಂತನೆಗಳನ್ನು ಹೊಂದಲು ಸಾಧ್ಯವಿದೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಆರಂಭವಾಗಿರುವ ಸಹಸ್ರಚಂಡಿಕಾಯಾಗದ ಪೂರ್ವಭಾವಿಯಾಗಿ ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಿಂದ ಆರಂಭವಾದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ದೇಗುಲಗಳಿಗೆ ಭೇಟಿ ನೀಡುವುದರಿಂದ ನಮ್ಮ ಸಂಸ್ಕಾರ, ಶಕ್ತಿ ವೃದ್ಧಿಯಾಗುತ್ತದೆ. ಅದು ನಮ್ಮ ಇಡೀ ಕುಟುಂಬವನ್ನು ಏಳಿಗೆಯತ್ತ ಕೊಂಡೊಯ್ಯುತ್ತದೆ. ಸಮಾಜಕ್ಕಾಗಿ ಮಾಡುವ ತ್ಯಾಗಕ್ಕೆ ಅತಿಮಹತ್ವವಿದೆ ಎಂದರು.
ಅಗಲ್ಪಾಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಅನಂತಗೋವಿಂದ ಶರ್ಮ ಕೋಳಿಕ್ಕಜೆ, ಶ್ರೀಗೋಪಾಲಕೃಷ್ಣ ಭಜನಾಮಂದಿರದ ಅಧ್ಯಕ್ಷ ಬಾಬುಮಾಸ್ತರ್ ಅಗಲ್ಪಾಡಿ, ಹಸಿರುವಾಣಿ ಹೊರೆಕಾಣಿಕೆ ಸಮಿತಿ ಸಂಚಾಲಕ ಸುಧಾಮ ಪದ್ಮಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಮೇಶಕೃಷ್ಣ ಪದ್ಮಾರು ಸ್ವಾಗತಿಸಿ, ಪ್ರಚಾರಸಮಿತಿ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಿಂದ ಆರಂಭವಾದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯು ಮಾರ್ಪನಡ್ಕದಲ್ಲಿ ಸಂಗಮಿಸಿ ರಾತ್ರಿ ಶ್ರೀಕ್ಷೇತ್ರಕ್ಕೆ ತಲುಪಿತು.
ಹೊರೆಕಾಣಿಕೆಗೆ ಜನಸಾಗರ :
ಭಾರೀ ಜನಸಾಗರದೊಂದಿಗೆ ಹೊರೆಕಾಣಿಕೆ ಮೆರವಣಿಗೆ ಯಶಸ್ವಿಯಾಗಿ ಜರಗಿತು. ತುಳುನಾಡಿನ ವಿವಿಧ ಕಲಾಪ್ರಾಕಾರಗಳಾದ ಮುತ್ತುಕೊಡೆ, ಚೆಂಡೆ, ಕುಣಿತ ಭಜನೆ, ನೃತ್ಯ, ಬೊಂಬೆಯಾಟ, ಗೀತೋಪದೇಶದ ರಥ, ಕೀಲುಕುದುರೆ ನೃತ್ಯಗಳು ಮನಮೋಹಕವಾಗಿದ್ದವು. ಸಂಘಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಊರಪರವೂ ಭಗವದ್ಭಕ್ತರು ಹೆಚ್ಚಿನಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.