ಬದಿಯಡ್ಕ: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಹಾಗೂ ವೇದಮಾತಾ ಟ್ರಸ್ಟ್ ಅಗಲ್ಪಾಡಿ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ಅಷ್ಟೋತ್ತರ ಸಹಸ್ರ ನಾರಿಕೇಳ ಗಣಪತಿ ಯಾಗ, ವೇದ ಪುರುಷನ ಪೂರ್ಣಾನುಗ್ರಹ ಪ್ರಾಪ್ತಿಗಾಗಿ ಋಕ್ ಸಂಹಿತಾ ಯಾಗ, ಐಕಮತ್ಯ ಹೋಮ, ರುದ್ರ ಹೋಮ, ಧನ್ವಂತರಿ ಹೋಮ ಹಾಗೂ ಸಹಸ್ರ ಚಂಡಿಕಾ ಯಾಗ, ಸಾನ್ನಿಧ್ಯ ವೃದ್ಧಿಗಾಗಿ ಕಲಶಾಭಿಷೇಕ ಸಮಾರಂಭಗಳಿಗೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಮಂಗಳವಾರ ಚಾಲನೆ ನೀಡಿದರು.
ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಶ್ರೀಗಳನ್ನು ಕ್ಷೇತ್ರದ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ಯಾಗ ಶಾಲೆಯ ಮಂಟಪದಲ್ಲಿ ದೀಪ ಪ್ರಜ್ವಲಿಸುವುದರೊಂದಿಗೆ ಚಾಲನೆ ನೀಡಿದರು. ಯಾಗದ ಸಂದರ್ಭ ಸರಸ್ವತಿ ವೇದಿಕೆಯಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶ್ರೀಗಳು ನಿರ್ವಹಿಸಿದರು.
ಯಾವುದೇ ಸ್ವಾರ್ಥವಿಲ್ಲದೇ ಯಜ್ಞ ಯಾಗಾದಿ ಮೂಲಕ ಶ್ರೀ ದೇವರನ್ನು ತೃಪ್ತಿಪಡಿಸಿದರೆ ನಮ್ಮ ಇಷ್ಟಾರ್ಥ ಸಾರ್ಥಕವಾಗುತ್ತದೆ. ಇಲ್ಲಿ ನಡೆಯುವ ಯಜ್ಞ ಯಾಗಾದಿಗಳು ಹಿಂದೂ ಸಮಾಜಕ್ಕೆ ಹೆಮ್ಮೆಯಾಗಿದೆ. ಯಾವುದೇ ಭೇದಭಾವವಿಲ್ಲದೇ ಲೋಕ ಸುಭಿಕ್ಷೆಗೆ ಶ್ರೀದೇವರ ಚೈತನ್ಯ ವೃದ್ಧಿಯೊಂದಿಗೆ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ವೇದಮಾತಾ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಡಾ. ಶ್ರೀಪತಿ ಕಜಂಪಾಡಿ, ರಾಧಾಕೃಷ್ಣ ದೇವಸ್ಥಾನದ ಗಿರಿಧರ ಭಟ್ ಮಂಗಳೂರು ಮಾತನಾಡಿದರು. ಆಡಳಿತ ಮೊಕ್ತಸರ ಕೋಳಿಕ್ಕಜೆ ಆನಂತಗೋವಿಂದ ಶರ್ಮಾ ಪ್ರಾಸ್ತಾವಿಕ ಮಾತನಾಡಿದರು. ಪದ್ಮಶ್ರೀ ಗಿರೀಶ್ ಭಾರದ್ವಾಜ್ ಉಪಸ್ಥಿತರಿದ್ದರು.
ಆರಂಭದಲ್ಲಿ ಸಂಗೀತ ವಿದ್ವಾನ್ ಯೋಗೀಶ್ ಶರ್ಮಾ ಬಳ್ಳಪದವು ಪ್ರಾರ್ಥನೆ ಹಾಡಿದರು. ಯಾಗ ಸಮಿತಿ ಸದಸ್ಯ ಕೃಷ್ಣಮೂರ್ತಿ ಎಡಪ್ಪಾಡಿ ಸ್ವಾಗತಿಸಿ, ಮಾಧವ ಭಟ್ ಕೊಟ್ಟಂಗುಳಿ ವಂದಿಸಿದರು. ಬಳಿಕ ಶ್ರೀಗಳು ಕ್ಷೇತ್ರದ ಸಮೀಪ ನಿರ್ಮಿಸಿದ ಅತಿಥಿಗೃಹದ ಉದ್ಘಾಟನೆ ನಿರ್ವಹಿಸಿದರು.