ಜೈಸಲ್ಮೇರ್: ಸ್ವದೇಶಿ ನಿರ್ಮಿತ ಸೇನಾ ಸಾಧನಗಳ ಪ್ರದರ್ಶನ 'ಭಾರತ್ ಶಕ್ತಿ'ಯು ರಾಜಸ್ಥಾನದ ಪೋಖ್ರಾನ್ ಫೈರಿಂಗ್ ರೇಂಜ್ನಲ್ಲಿ ಮಂಗಳವಾರದಿಂದ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಿದರು.
50 ನಿಮಿಷಗಳ ಈ ರೋಮಾಂಚನಕಾರಿ ಪ್ರದರ್ಶನವನ್ನು ಪ್ರಧಾನಿ ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ವೀಕ್ಷಿಸಿದರು.
ಜೈಸಲ್ಮೇರ್ನಿಂದ 100 ಕಿ.ಮೀ. ದೂರದಲ್ಲಿರುವ ಪೋಖ್ರಾನ್ನಲ್ಲಿ ನಡೆದ ಈ ಪ್ರದರ್ಶನದಲ್ಲಿ ಎಲ್ಸಿಎ ತೇಜಸ್, ಎಎಲ್ಎಚ್ ಎಂಕೆ-4, ಎಲ್ಸಿಎಚ್ ಪ್ರಚಂಡ, ಮೊಬೈಲ್ ಡ್ರೋಣ್ ನಿರೋಧಕ ವ್ಯವಸ್ಥೆ, ಬಿಎಂಪಿ-2 ಹಾಗೂ ಅದರ ಇತರ ಮಾದರಿಗಳು, ನಾಗ್ ಕ್ಷಿಪಣಿ ವಾಹಕ, ಟಿ90 ಟ್ಯಾಂಕ್ಗಳು, ಧನುಶ್, ಕೆ9 ವಜ್ರ ಮತ್ತು ಪಿನಾಕ ರಾಕೇಟ್ಗಳು ತಮ್ಮ ಸಾಮರ್ಥ್ಯ ತೋರಿದವು.
'ದೇಶೀಯವಾಗಿ ಈ ಪ್ರದರ್ಶನ ಅತ್ಯಂತ ನಿರ್ಣಾಯಕ ಎಂದೇ ಪರಿಗಣಿಸಲಾಗುತ್ತದೆ. ನೈಜ ಸಿಡಿತಲೆ ಸಹಿತ ಪ್ರದರ್ಶನಗೊಳ್ಳುವ ಈ ವೇದಿಕೆಯಲ್ಲಿ, ಮೂರೂ ಸೇನೆಗಳ ಕಾರ್ಯಾಚರಣೆಯ ಕೌಶಲ, ಯಾವುದೇ ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯ, ಜಾಗತಿಕ ಮಟ್ಟದ ಸ್ಪರ್ಧೆಯನ್ನೂ ಸಮರ್ಥವಾಗಿ ಎದುರಿಸುವ ಪ್ರಾಬಲ್ಯ ಈ ವೇದಿಕೆಯಲ್ಲಿ ಪ್ರದರ್ಶನಗೊಳ್ಳುತ್ತದೆ' ಎಂದು ಸೇನಾ ಸಾಧನಗಳ ವಿನ್ಯಾಸ ವಿಭಾಗದ ಸಹ ಮಹಾ ನಿರ್ದೇಶಕ ಮೇಜರ್ ಜನರಲ್ ಸಿ.ಎಸ್.ಮನ್ ತಿಳಿಸಿದರು.
'ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಏನನ್ನೂ ಗುರಿಯಾಗಿರಿಸಿಕೊಳ್ಳದೇ ನಡೆದ ಮೊದಲ ಸೇನಾ ಪ್ರದರ್ಶನ ಇದಾಗಿದೆ' ಎಂದು ಸೇನಾ ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 'ಪ್ರಸಕ್ತ ಹಾಗೂ ಭವಿಷ್ಯದ ಯಾವುದೇ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಹಾಗೂ ಎಲ್ಲಾ ರೀತಿಯ ಸವಾಲುಗಳಿಗೆ ಸಜ್ಜಾಗಲು ಈ ವೇದಿಕೆ ಪ್ರಮುಖವಾಗಿದೆ. 'ಭಾರತ್ ಶಕ್ತಿ' ಪ್ರದರ್ಶನದ ಮೂಲಕ ಸ್ವದೇಶಿ ನಿರ್ಮಿತ ಸೇನಾ ಸಾಧನಗಳ ಸ್ಥಿತಿಸ್ಥಾಪಕತ್ವ, ನಾವೀನ್ಯತೆ ಮತ್ತು ಶಕ್ತಿ ಜಾಗತಿಕ ಮಟ್ಟಕ್ಕೆ ಪರಿಚಯಗೊಂಡಂತಾಗಿದೆ' ಎಂದಿದ್ದಾರೆ.
'ಸೇನಾ ವಲಯದಲ್ಲೂ ದೇಶದ ಆತ್ಮನಿರ್ಭರತೆಯ ಸದೃಢ ಹೆಜ್ಜೆಗಳನ್ನು ಭಾರತ ಇಡುತ್ತಿರುವುದನ್ನು ಈ ಪ್ರದರ್ಶನ ಸಾಬೀತುಪಡಿಸಿದೆ. ಜತೆಗೆ ಸೇನಾ ವಲಯದ ಕೈಗಾರಿಕೆಗಳನ್ನು ಕಟ್ಟುವ ಬದ್ಧತೆಯನ್ನು ದೇಶದ ಸಶಸ್ತ್ರ ಬಲವು ಪ್ರದರ್ಶಿಸಿದೆ' ಎಂದು ಬಣ್ಣಿಸಿದ್ದಾರೆ.