ಮಂಜೇಶ್ವರ: ಉನ್ನತ ಶಿಕ್ಷಣ, ಉದ್ಯೋಗ ಹಾಗು ಉತ್ತಮ ಜೀವನಕ್ಕಾಗಿ ಕಾಸರಗೋಡಿನ ಯುವ ಸಮೂಹ ಇತರ ರಾಜ್ಯಗಳಿಗೆ ಪಲಾಯನ ಮಾಡುತ್ತಿದ್ದಾರೆಂದು ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ ಹೇಳಿದರು.
ಅವರು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚೆರುಗೋಳಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಉನ್ನತ ಶಿಕ್ಷಣಕ್ಕೆ ಯಾವುದೇ ಉತ್ತಮ ಕಾಲೇಜುಗಳಿಲ್ಲ, ಸಾಕಷ್ಟು ಉದ್ಯೋಗಾವಕಾಶಗಳಿಲ್ಲ. ಈ ಹಿನ್ನೆಲೆಯಲ್ಲಿ ಯುವ ಜನಾಂಗ ಪಲಾಯನ ಮಾಡುತ್ತಿದ್ದಾರೆ ಎಂದರು. ಹದಿನಾಲ್ಕು ವರ್ಷಗಳೇ ಕಳೆದರೂ ಚಿಮೇನಿಯಲ್ಲಿ ಐಟಿ-ಕೈಗಾರಿಕಾ ಪಾರ್ಕ್ ಸಾಕಾರಗೊಳಿಸಲು ಸಾಧ್ಯವಾಗಿಲ್ಲ. ಸಾರ್ವಜನಿಕ ಕ್ಷೇತ್ರವಾಗಲೀ, ಖಾಸಗಿ ಕ್ಷೇತ್ರವಾಗಲೀ ಉದ್ಯೋಗ ಅವಕಾಶ ಸೃಷ್ಟಿಸುವುದಿಲ್ಲ. ಉನ್ನತ ಶಿಕ್ಷಣಕ್ಕೆ ಅನ್ಯ ರಾಜ್ಯಗಳನ್ನು ಆಶ್ರಯಿಸಬೇಕಾಗಿದೆ. ಕೇರಳದಲ್ಲಿ ಉದ್ಯೋಗಾವಕಾಶಗಳಿಲ್ಲದ್ದರಿಂದ ಕೇರಳಕ್ಕೆ ವಾಪಸಾಗಲು ಯುವ ಸಮೂಹ ಸಿದ್ಧರಾಗುತ್ತಿಲ್ಲ. ಕಾಸರಗೋಡು ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸಲು ಎನ್ಡಿಎಗೆ ಮಾತ್ರ ಸಾಧ್ಯವೆಂದು ಅವರು ಹೇಳಿದರು.
ಬೂತ್ ಅಧ್ಯಕ್ಷ ಶ್ರೀಧರನ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್, ವಿಜಯ ಕುಮಾರ್ ರೈ, ರಾಜ್ಯ ಸಮಿತಿ ಸದಸ್ಯರಾದ ಸತೀಶ್ಚಂದ್ರ ಭಂಡಾರಿ ಕೋಳಾರು, ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ, ಮಂಡಲ ಸಮಿತಿ ಸದಸ್ಯ ಬಾಲಕೃಷ್ಣನ್, ರೇವತಿ ಮೊದಲಾದವರು ಮಾತನಾಡಿದರು.


