ಬದಿಯಡ್ಕ : ಬದಿಯಡ್ಕ ಪೇಟೆಯಲ್ಲಿ ವ್ಯಾಪಾರಿಗಳ ಮಧ್ಯೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ತರಕಾರಿ ವ್ಯಾಪಾರಿ ಚೆಡೇಕಲ್ ನಿವಾಸಿ ಶರೀಫ್ ಎಂಬವರ ದೂರಿನ ಮೇರೆಗೆ ಬಾರ್ಬರ್ ಶಾಪ್ ಮಾಲಿಕ ರಾಜೇಶ್, ಸಹೋದರ ರಂಜಿತ್, ಮುನ್ನ, ಗಿರೀಶ್ ಹಾಗೂ ರಂಜಿತ್ ಎಂಬವರ ದೂರಿನ ಮೇರೆಗೆ ಸಕರಿಯಾ ಎಂಬಾತನನ್ನು ಬಂಧಿಸಲಾಗಿದೆ.
ಪೇಟೆಯಲ್ಲಿ ಪರಸ್ಪರ ವಾಗ್ವಾದ ಹಾಗೂ ಹೊಡೆದಾಟಕ್ಕೆ ಸಂಬಂಧಿಸಿ ತರಕಾರಿ ಅಂಗಡಿ ನಡೆಸುವ ಚೆಡೆಕ್ಕಲ್ ನಿವಾಸಿ ಶರೀಫ್, ಸಕರಿಯಾ, ರಾಜೇಶ್, ರಂಜಿತ್, ಮುನ್ನ, ಗಿರೀಶ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿತ್ತು. ಹೊಡೆದಾಟದಲ್ಲಿ ಶರೀಪ್, ರಾಜೇಶ್, ರಂಜಿತ್ ಎಂಬವರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರು. ತರಕಾರಿ ಅಂಗಡಿ ಸಿಬ್ಬಂದಿ ಸಕರಿಯಾ ಹಾಗೂ ಬಾರ್ಬರ್ ಶಾಪ್ ಮಾಲಿಕ ರಾಜೇಶ್ ಮಧ್ಯೆ ವಾಗ್ವಾದ ನಡೆದಿದ್ದು, ಇವರನ್ನು ಸಮಾಧಾನಪಡಿಸಲು ಶರೀಫ್ ಮುಂದಾಗಿದ್ದರು. ಈ ಸಂದರ್ಭ ರಾಜೇಶ್ ಸಹೋದರ ರಂಜಿತ್ ಹಾಗೂ ಇತರರು ಸ್ಥಳಕ್ಕಾಗಮಿಸಿದಾಗ ವಾಗ್ವಾದ ಹೆಚ್ಚಾಗಿ ಪರಸ್ಪರ ಹೊಡೆದಾಟ ನಡೆದಿತ್ತು.




