ನವದೆಹಲಿ: 'ಬೆಲೆ ಏರಿಕೆಯಿಂದ ದಿನನಿತ್ಯದ ಅಗತ್ಯ ವಸ್ತುಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಅನಿರ್ವಾಯತೆ ದೇಶದ ಜನತೆಗೆ ಎದುರಾಗಿದ್ದು, ಸರ್ಕಾರ ಮಾತ್ರ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದೆ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇಲ್ಲಿನ ಗಿರಿ ನಗರದಲ್ಲಿರುವ ತರಕಾರಿ ಮಾರುಕಟ್ಟೆಗೆ ಇತ್ತೀಚೆಗೆ ಭೇಟಿ ನೀಡಿರುವ ರಾಹುಲ್ ಗಾಂಧಿ ಅವರು ಆಹಾರ ಪದಾರ್ಥಗಳ ಬೆಲೆ ಏರಿಕೆ ಕುರಿತು ಗೃಹಿಣಿಯರ ಜೊತೆ ಸಂವಾದ ನಡೆಸಿದ್ದಾರೆ.
ಈ ಕುರಿತ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
'ಕೆಲ ದಿನಗಳ ಹಿಂದೆ ಇಲ್ಲಿನ ಸ್ಥಳೀಯ ಮಾರುಕಟ್ಟೆಗೆ ತೆರಳಿ ಜನರೊಂದಿಗೆ ಆಹಾರ ಪದಾರ್ಥಗಳ ಖರೀದಿ ಮಾಡಿದೆ. ಈ ವೇಳೆ ಹಣದುಬ್ಬರವು ಪ್ರತಿಯೊಬ್ಬರನ್ನು ಹೇಗೆ ತೊಂದರೆಗೆ ತಳ್ಳಿದೆ ಎಂಬ ಬಗ್ಗೆ ವ್ಯಾಪಾರಿಗಳ ಬಳಿ ಚರ್ಚಿಸಿದೆ' ಎಂದು ವಿಡಿಯೊದಲ್ಲಿ ರಾಹುಲ್ ಹೇಳಿದ್ದಾರೆ.
'ಬೆಳ್ಳುಳ್ಳಿ, ಅವರೆಕಾಳು, ಅಣಬೆ ಮತ್ತಿತರ ತರಕಾರಿಗಳ ಬೆಲೆಯನ್ನು ಚರ್ಚಿಸಿ ಜನರ ನೈಜ ಅನುಭವಗಳನ್ನು ಕೇಳಿ ತಿಳಿದುಕೊಂಡೆ. ಬೆಳ್ಳುಳ್ಳಿ ಕೆ.ಜಿಗೆ 400, ಅವರೆಕಾಳು ಕೆ.ಜಿಗೆ 120... ಹೀಗಾದರೆ ಜನ ತಿನ್ನುವುದೇನು? ಉಳಿಸುವುದೇನು?' ಎಂದು ಕೇಳಿದ್ದಾರೆ.
'ಒಂದು ಕಾಲದಲ್ಲಿ ಕೆ.ಜಿಗೆ ₹40 ಇದ್ದ ಬೆಳ್ಳುಳ್ಳಿ ಬೆಲೆ ಇಂದು ₹400 ಆಗಿದೆ... ಬೆಲೆ ಏರಿಕೆಯಿಂದ ಜನರು ಹೈರಾಣಾಗಿದ್ದು, ದಿನನಿತ್ಯದ ಅಗತ್ಯಗಳನ್ನು ಪೂರೈಸುವುದರಲ್ಲಿಯೂ ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.





