ಪೆರ್ಲ: ಅತ್ಯಂತ ಪ್ರಸಿದ್ಧ ಮತ್ತು ಪುರಾತನ ಕ್ಷೇತ್ರವಾದ ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದಲ್ಲಿ ಮೇ 6 ರಿಂದ ಮೇ 11ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿರುವುದು ಎಂದು ನಿನ್ನೆ ಕ್ಷೇತ್ರಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ತಾರಾನಾಥ ರೈ ಪಡ್ಡಂಬೈಲು ತಿಳಿಸಿದರು.
ಬ್ರಹ್ಮಕಲಶೋತ್ಸವದ ಬಗ್ಗೆ ಮಾಹಿತಿ ನೀಡಿದ ಅವರು, ಕಾಟುಕುಕ್ಕೆ ನಾಲ್ಕು ಗ್ರಾಮಗಳ ಗ್ರಾಮ ದೇವಸ್ಥಾನವಾಗಿದ್ದು, ಇತ್ತೀಚೆಗೆ ಎರಡು ವರ್ಷಗಳ ಹಿಂದೆ ಅಷ್ಟಮಂಗಲ ಚಿಂತನೆ ಶ್ರೀ ಕ್ಷೇತ್ರದಲ್ಲಿ ನಡೆದು ಪರಿಹಾರ ಪ್ರಾಯಶ್ಚಿತ್ತ ಕರ್ಮಗಳು ನಡೆದಿತ್ತು . ಅನಂತರದಲ್ಲಿ ಕ್ಷೇತ್ರ ತಂತ್ರಿಗಳಿಂದ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಬೇಕು ಎನ್ನುವ ನಿರ್ದೇಶನ ಲಭಿಸಿತ್ತು ಕಳೆದ ವರ್ಷ ದಾನಿಗಳ ನೆರವಿನಿಂದ ಶ್ರೀ ದೇವರಿಗೆ ರಥ ಸಮರ್ಪಣೆಯೊಂದಿಗೆ ವಿಜೃಂಭಣೆಯಿಂದ ರಥೋತ್ಸವ ನಡೆದಿತ್ತು.. ಈ ವರ್ಷದ ಷಷ್ಠಿ ಮಹೋತ್ಸವದ ಕೊನೆಗೆ ಕ್ಷೇತ್ರ ತಂತ್ರಿಗಳು ಗರ್ಭಗುಡಿಯ ದೇವರ ಪೀಠ ಮತ್ತು ಮೂರ್ತಿಯ ನಡುವಿನ ಬಂಧ ಬಿಟ್ಟಿದ್ದು ಶೀಘ್ರ ಅಷ್ಟಬಂಧ ಬ್ರಹ್ಮಕಲಶ ಮಾಡುವಂತೆ ಅನುಜ್ಞೆ ನೀಡಿರುತ್ತಾರೆ.
2013ರಲ್ಲಿ ಬ್ರಹ್ಮಕಲಶ ನಡೆದಿದ್ದು ಇದೀಗ 12 ವರ್ಷ ಪೂರ್ತಿಗೊಂಡಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮತ್ತು ಸ್ಥಳೀಯ ಭಕ್ತರು ಒಟ್ಟುಸೇರಿ ಸಮಿತಿ ರೂಪೀಕರಣ ನಡೆಸಿ ಶ್ರೀ ಸುಬ್ರಾಯ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಮುಂದಾಗಿದ್ದೇವೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಮಾತನಾಡಿ, ಕ್ಷೇತ್ರದಲ್ಲಿ ಗರ್ಭಗುಡಿಗೆ ಸಂಬಂಧಪಟ್ಟ ಕೆಲವು ಜೀರ್ಣೋದ್ಧಾರ ಕಾರ್ಯಗಳಲ್ಲದೆ ಹೊರಾಂಗಣದಲ್ಲಿ ಇನ್ನಿತರ ಸಣ್ಣ ಪುಟ್ಟ ಕೆಲಸ ಕಾರ್ಯಗಳು ನಡೆಯಲಿದೆ. ಕ್ಷೇತ್ರಾಂಗಣದಲ್ಲಿ ಭಕ್ತ ಜನ ಅನುಕೂಲಕ್ಕಾಗಿ ಸುಸಜ್ಜಿತವಾದ ಸೇವಾ ಕೌಂಟರ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಚಕ್ಕಿತ್ತಡ್ಕ ಮಾತನಾಡಿ, ಈಗಾಗಲೇ ಬ್ರಹ್ಮಕಲಶೋತ್ಸವದ ಪ್ರಧಾನ ಸಮಿತಿಯನ್ನು ರಚಿಸಲಾಗಿದ್ದು ಇದಕ್ಕೆ ಪೂರಕವಾದ ಉಪ ಸಮಿತಿಗಳನ್ನು ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಎಲ್ಲರ ಉಪಸ್ಥಿತಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೆ ಈ ಬಾರಿ ನಾಲ್ಕು ಗ್ರಾಮದಿಂದಲೂ ಪ್ರತಿಯೊಬ್ಬ ಪ್ರಮುಖರನ್ನು ಮುಖ್ಯ ಸಮಿತಿಯ ಉಪಾಧ್ಯಕ್ಷರನ್ನಾಗಿಸಿ ನಾಲ್ಕು ಗ್ರಾಮದ ಭಕ್ತರನ್ನು ಸಂಪರ್ಕಿಸಿ ನಾಲ್ಕೂ ಗ್ರಾಮದಲ್ಲಿರುವ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಕೇಂದ್ರೀಕರಿಸಿ ಪ್ರಾದೇಶಿಕ ಸಮಿತಿ ರಚಿಸಿ ಎಲ್ಲರನ್ನೂ ಈ ಬ್ರಹ್ಮಕಲಶೋತ್ಸವ ಸೇವೆಯಲ್ಲಿ ಪಾಲ್ಗೊಳ್ಳಿಸುವ ಉದ್ದೇಶ ಇರಿಸಲಾಗಿದೆ ಎಂದರು.
ಆಡಳಿತ ಮಂಡಳಿ ಸದಸ್ಯರಾದ ಸುಧಾಕರ ಕಲ್ಲಗದ್ದೆ, ಚನಿಯಪ್ಪ ಪರಗುಡ್ಡೆ,ರಿತೇಶ್ ಕಿರಣ್ ಕಾಟುಕುಕ್ಕೆ, ಸಮಿತಿ ಜೊತೆ ಕಾರ್ಯದರ್ಶಿ ಸಾತ್ವಿಕ್ ಖಂಡೇರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



