ಬದಿಯಡ್ಕ: ಕಾಲಕಾಲಕ್ಕೆ ಎದುರಾದಂತಹ ದುರಿತಗಳಿಂದಾಗಿ ನಾಶಹೊಂದಿದ ಕ್ಷೇತ್ರಗಳು, ದೇವತಾ ಸಾನ್ನಿಧ್ಯ ಶಕ್ತಿಗಳ ಪ್ರೇರಣೆಯಿಂದ ಪುನರುದ್ಧಾರಗೊಳ್ಳುವುದರೊಂದಿಗೆ ಸನಾತನ ಧರ್ಮ ವಿಶ್ವಾಸಿಗಳ ಬದ್ಧತೆ, ಧಾರ್ಮಿಕ ನಂಬಿಕೆ ಬಲಗೊಳ್ಳುತ್ತದೆ. ಹಿಂದೂ ಸನಾತನ ಪರಂಪರೆ ಗತವೈಭವÀವನ್ನು ಮತ್ತೆ ಕಾಣುವಂತಾಗಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಕೊಲ್ಲಂಗಾನ ಅರ್ತಲೆ ಶ್ರೀ ರಕ್ತೇಶ್ವರಿ ನಾಗ ಗುಳಿಗ ಸನ್ನಿಧಿಯಲ್ಲಿ ಜರಗಿದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಪಾಲ್ಗೊಂಡು ಜರಗಿದ ಸಭಾ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚ ನೀಡಿದರು.
ದೇವತಾ ಕಾರ್ಯಗಳು ಅನೂಚಾನವಾಗಿ ಮುಂದುವರಿಯಬೇಕು ಎಂದಾದರೆ ಭಗವದ್ಭಕ್ತರು ನಿಷ್ಠೆಯಿಂದ ಧಾರ್ಮಿಕ ಕ್ಷೇತ್ರಗಳತ್ತ ಸಾಗಬೇಕು ಎಂದರು.
ಉದ್ಯಮಿ, ಧಾರ್ಮಿಕ ಮುಂದಾಳು ಮಧುಸೂದನ ಆಯರ್ ಮಂಗಳೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.. ಸುಬ್ಬಣ್ಣ ನಾಯ್ಕ ಅರ್ತಲೆ ಅಧ್ಯಕ್ಷತೆ ವಹಿಸಿದ್ದರು. ಮಧೂರು ದೇವಸ್ಥಾನದ ಪವಿತ್ರಪಾಣಿ ರತನ್ ಕುಮಾರ್ ಕಾಮಡ, ಪಾಡಿ ಅರಮನೆಯ ಹರಿಪ್ರಸಾದ ಜೆ.ಎಸ್., ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಭಟ್ ಪಾಡಿ ಶುಭಹಾರೈಸಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೊ.ಎ..ಶ್ರೀನಾಥ್ ಸ್ವಾಗತಿಸಿ, ಮಹೇಶ್ ವಳಕ್ಕುಂಜ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಅರ್ತಲೆ ಸಹಕರಿಸಿದರು.

