ನವದೆಹಲಿ: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ದಕ್ಷಿಣ ಆಫ್ರಿಕಾದಲ್ಲಿ ಭೇಟಿಯಾಗಿ, ಉಭಯ ರಾಷ್ಟ್ರಗಳ ಬಾಂಧವ್ಯದ ಬೆಳವಣಿಗೆಗಳು, ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಯ್ದುಕೊಳ್ಳುವಿಕೆ ಹಾಗೂ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭದ ಕುರಿತು ಚರ್ಚಿಸಿದರು.
ಜೋಹಾನೆಸ್ಬರ್ಗ್ನಲ್ಲಿ ನಡೆಯುತ್ತಿರುವ ಜಿ20 ದೇಶಗಳ ವಿದೇಶಾಂಗ ಸಚಿವರ ಸಭೆಯ ಸಂದರ್ಭ ಉಭಯ ನಾಯಕರು ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
'ಉಭಯ ನಾಯಕರು ನವೆಂಬರ್ನಲ್ಲಿ ತಮ್ಮ ಕೊನೆಯ ಭೇಟಿಯ ನಂತರ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದರು. ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡುವ, ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭಿಸುವ, ವಿಮಾನ ಸಂಪರ್ಕ ಮತ್ತು ಪ್ರಯಾಣದ ಅನುಕೂಲಗಳ ಬಗ್ಗೆಯೂ ಚರ್ಚಿಸಿದರು' ಎಂದು ಅವರು ಹೇಳಿದರು.
ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲು ಜೈಶಂಕರ್ ಅವರು ದಕ್ಷಿಣ ಆಫ್ರಿಕಾಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಜೋಹಾನೆಸ್ಬರ್ಗ್ನಲ್ಲಿದ್ದಾರೆ.




