ಕಾಸರಗೋಡು: ಜಿಲ್ಲೆಯ ಪ್ರಮುಖ ಭಗವತೀ ಕ್ಷೇತ್ರಗಳಲ್ಲಿ ಒಂದಾದ ಪಾಲಕುನ್ನು ಶ್ರೀ ಭಗವತೀ ಕ್ಷೇತ್ರದಲ್ಲಿ ಮಹಾ ನೈವೇದ್ಯ ಸಮರ್ಪಣಾ ಕಾರ್ಯ ಭಕ್ತಿ, ಸಡಗರದಿಂದ ಶುಕ್ರವಾರ ನೆರವೇರಿತು. ಪಾಲಕುನ್ನು ಕಯಗಂ ವ್ಯಾಪ್ತಿಯ ಸಾವಿರಾರು ಮಂದಿ ಭಕ್ತಾದಿಗಳು ಮಣ್ಣಿನ ಹೊಸ ಮಡಕೆಯೊಂದಿಗೆ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಸಕ್ಕರೆ, ಅಕ್ಕಿ ಹುಡಿ ಸೇರಿದಂತೆ ನೈವೇದ್ಯ ತಯಾರಿಸಲಿರುವ ಸಾಮಗ್ರಿ ಸಮರ್ಪಿಸಿದರು. ಈ ರೀತಿ ಸಮರ್ಪಿಸುವ ಸುವಸ್ತುಗಳನ್ನು ಸೇರಿಸಿ ದೇವಾಲಯ ವಠಾರದಲ್ಲಿ ನೈವೇದ್ಯ ತಯಾರಿಸಿ ಶ್ರೀದೇವಿಗೆ ಸಮರ್ಪಿಸುವುದು ವಾಡಿಕೆ.
ಪಾಲಕುನ್ನು ಶ್ರೀ ಭಗವತೀ ಕ್ಷೇತ್ರದಲ್ಲಿ ವರ್ಷದಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಎರಡು ಬಾರಿ ನೈವೇದ್ಯ ಸಮರ್ಪಿಸಲಾಗುತ್ತಿದ್ದು, ಫೆಬ್ರವರಿ ತಿಂಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕಲ್ಪಿಸಲಾಗುತ್ತಿದೆ. ಶ್ರೀ ಭಗವತೀ ಮಾತೆಗೆ ನೈವೇದ್ಯ ಸಮರ್ಪಿಸಿದ ನಂತರ ಉಳಿದ ನೈವೇದ್ಯವನ್ನು ಭಕ್ತಾದಿಗಳು ಪ್ರಸಾದ ರೂಪದಲ್ಲಿ ಮನೆಗೆ ಕೊಂಡೊಯ್ಯುವುದು ವಾಡಿಕೆಯಾಗಿದೆ.



